ಉಡುಪಿ: ಜಿಲ್ಲೆಯಲ್ಲಿ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಸಾರ್ವಜನಿಕ ಗಣೇಶೋತ್ಸವ ಪೆಂಡಾಲ್ ಗಳಲ್ಲಿ ವಿಘ್ನ ವಿನಾಯಕನಿಗೆ ಪೂಜೆ ಅದ್ದೂರಿಯಿಂದ ನಡೆಯುತ್ತಿದೆ. ನಗರದ ಕಡಿಯಾಳಿ ದೇವಸ್ಥಾನದ ಸಾರ್ವಜನಿಕ ಗಣೇಶೋತ್ಸವ ಸೇರಿದಂತೆ ಜಿಲ್ಲೆಯ ನಾನ ಕಡೆಗಳಲ್ಲಿ ಸಾವರ್ಕರ್ ಪೋಟೊವನಿಟ್ಟು ಪುಷ್ಪಾರ್ಚನೆ ನಡೆಸುವ ಮೂಲಕ ಸಾವರ್ಕರ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಉಡುಪಿಯ ಪ್ರಥಮ ಗಣೇಶ ಪೆಂಡಾಲ್ ಆಗಿರುವ ಕಡಿಯಾಳಿಯ ಮಹಿಷಮರ್ದಿನಿ ದೇವಳದ ಆವರಣದಲ್ಲಿ 56ನೇ ವರ್ಷ ಗಣೇಶೋತ್ಸವ ಆಚರಿಸುತ್ತಿರುವ ಮಂಡಳಿಯೂ ಸಾವರ್ಕರ್ ಭಾವಚಿತ್ರದ ಜೊತೆಗೆ ಅವರ ಜೀವನ ಚರಿತ್ರೆ ಕುರಿತ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ. ಗಣೇಶೋತ್ಸವ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಸಾವರ್ಕರ್ ಪುಸ್ತಕವನ್ನು ಸ್ಮರಣಕೆಯಾಗಿ ನೀಡಲಾಗುತ್ತಿದೆ.
ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರಾದ ರಾಘವೇಂದ್ರ ಕಿಣಿಯವರು ಹೊಸದಿಗಂತದ ಜೊತೆ ಮಾತನಾಡಿ ಐದು ದಿನಗಳ ಕಾಲ ಗಣೇಶ ಮೂರ್ತಿಯ ಜೊತೆಗೆ ಸಾವರ್ಕರ್ ಭಾವಚಿತ್ರ ಪ್ರದರ್ಶನವಾಗಲಿದ್ದು, ಸಾವರ್ಕರ್ ಬಗೆಗಿನ ಅಪಪ್ರಚಾರ ಗಳಿಗೆ ಉತ್ತರ ನೀಡಲು ಈ ವ್ಯವಸ್ಥೆ ಮಾಡಿದ್ದೇವೆ. ಸಾವರ್ಕರ್ ಒಬ್ಬ ಅಪ್ರತಿಮ ದೇಶಭಕ್ತ ಅನ್ನುವುದನ್ನು ಸಾಬೀತು ಮಾಡುವ ಕಾಲ ಬಂದಿದೆ. ಗಣೇಶೋತ್ಸವದ ಆಚರಣೆಯ ಉದ್ದೇಶವು ಹಿಂದುತ್ವದ ರಕ್ಷಣೆ, ಸಾವರ್ಕರ್ ಅವರ ಉದ್ದೇಶ ಕೂಡ ಹಿಂದುತ್ವದ ರಕ್ಷಣೆಯಾಗಿತ್ತು. ಗಣೇಶೋತ್ಸವ ಮತ್ತು ಸಾವರ್ಕರ್ ಅವರ ಜೀವನದ ಆಶಯ ಒಂದೆಯಾಗಿದೆ ಎಂದರು.