ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನ ಸೂರತ್ ಹಾಗೂ ಮಧ್ಯಪ್ರದೇಶದ ಇಂದೋರ್ ಬಳಿಕ ಕಾಂಗ್ರೆಸ್ಗೆ ಮತ್ತೊಂದು ಕ್ಷೇತ್ರದ ಅಭ್ಯರ್ಥಿ ಶಾಕ್ ನೀಡಿದ್ದಾರೆ.
ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಚರಿತಾ ಮೊಹಂತಿ ಅವರು ಚುನಾವಣೆಗೆ ಕೆಲವೇ ದಿನಗಳಿರುವಾಗ ತಾನು ಚುನಾವಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಇದರಿಂದ ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಕೆಲ ಕ್ಷೇತ್ರಗಳಲ್ಲಿ ಯುದ್ಧಕ್ಕೂ ಮೊದಲು ಸೋಲೊಪ್ಪುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತನ್ನ ಬಳಿ ಹಣದ ಕೊರತೆ ಇದ್ದು ಪುರಿಯಲ್ಲಿ ಚುನಾವಣೆ ಗೆಲುವಿಗೆ ಹಣಕಾಸಿ ಕೊರತೆ ಆಗಿದೆ. ತನ್ನ ಬಳಿ ಅಷ್ಟೊಂದು ಹಣವಿಲ್ಲ, ಕೇವಲ ಹಣದ ಕೊರತೆಯೊಂದೇ ನಮ್ಮನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುತ್ತಿದೆ. ಪಕ್ಷದಿಂದ ಹಣಕಾಸಿನ ನೆರವು ಸಿಗದೇ ಈ ಕ್ಷೇತ್ರದಲ್ಲಿ ಪ್ರಚಾರ ಮಾಡಿ ಗೆಲುವು ಸಾಧಿಸುವುದು ಕಷ್ಟ ಸಾಧ್ಯ. ಹೀಗಾಗಿ ಪುರಿ ವಿಧಾನಸಭಾ ಕ್ಷೇತ್ರದಿಂದ ನನಗೆ ಕಾಂಗ್ರೆಸ್ನಿಂದ ನೀಡಿರುವ ಟಿಕೆಟ್ ಅನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಸುಚರಿತಾ ಮೊಹಂತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.