ಹೊಸದಿಗಂತ ವರದಿ ಬಾಗಲಕೋಟೆ:
ಜನರ ಜೀವನ ವಿಧಾನ ಚೆನ್ನಾಗಿ ಆಗಬೇಕು. ಕೊರತೆ ಕಡಿಮೆ ಮಾಡುವ ಉದ್ದೇಶ ನನ್ನದು ಮತ್ತು ನನ್ನ ತಂಡದ ಕೆಲಸವಾಗಿದೆ. ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ವರ್ತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.
ನವನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಬಾಗಲಕೋಟೆ ಜಿಲ್ಲೆಯ ಜನರಿಗೆ ಒಳ್ಳೆಯ ಕೆಲಸ ಮಾಡುತ್ತೇವೆ ಎಂದರು.
ಜಿಲ್ಲೆಯಲ್ಲಿ ಖಾಲಿ ಇರುವ ಸೂಕ್ತ ಅಧಿಕಾರಿಗಳನ್ನು ಪೂರ್ಣ ಪ್ರಮಾಣ ನೀಡಲು ಸಂಬಂಧಪಟ್ಟ ಮಂತ್ರಿಗಳಿಗೆ ಪತ್ರ ಬರೆಯಲಾಗುವುದು.
ಕುಡಿಯುವ ನೀರಿನ ಸಮಸ್ಯೆ ಗಮನಕ್ಕೆ ಬಂದಿದೆ. ಒಂದೂವರೆ ತಿಂಗಳು ಮಳೆ ಬರದೇ ಇದ್ದರೆ ಪರ್ಯಾಯವಾಗಿ ಜನರಿಗೆ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಲಾಗಿದೆ. 120 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಲಿದೆ ಎಂದು ಪಟ್ಟಿ ಮಾಡಲಾಗಿದೆ ಇನ್ನೂ ಒಂದು ಗ್ರಾಮಕ್ಕೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿಲ್ಲ, ತುರ್ತು ಪರಿಸ್ಥಿತಿ ಇದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತೇವೆ ಎಂದರು.
ಕುಡಿಯುವ ನೀರು ಸೌಲಭ್ಯ ಕೊಡಲು ಯಾವುದೇ ವಿಳಂಬ ಮಾಡುವುದಿಲ್ಲ. ಸಮಸ್ಯೆಯಾದಾಗ ದುಡ್ಡು ಇಲ್ಲ ಎಂದು ಯಾವುದೇ ನೆಪ ಹೇಳದೇ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಜನರೊಂದಿಗೆ ಸೌಜನ್ಯತೆಯಿಂದ ವರ್ತಿಸಬೇಕು. ಸಾರ್ವಜನಿಕ ಕರೊಂದಿಗೆ ಅನುಚಿತವಾಗಿ ವರ್ತಿಸುವುದು ,ಗೌರವ ಕೊಡದೇ ಇರುವುದನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕೆಲಸ ಒಂದು ದಿನ ತಡವಾದರೂ ಸರಿ ಆದರೆ ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ ಎಂದರು.
ಶಿಕ್ಷಣ ಗುಣಮಟ್ಡ ಚೆನ್ನಾಗಿರಬೇಕು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ, ಶಿಕ್ಷಣ ಪ್ರಮುಖ ಘಟ್ಟವಾಗಿದೆ. ಶಿಕ್ಷಣಕ್ಕೆ ಆಧ್ಯತೆ ಹೆಚ್ಚು ಕಾಳಜಿ ಕೊಡುವುದು, ಫಲಿತಾಂಶದಲ್ಲಿ ಜಿಲ್ಲೆಯು ಟಾಪ್ 5ರಲ್ಲಿ ಬರಬೇಕು ಎಂಬುದು ನಮ್ಮ ಗುರಿಯಾಗಿದೆ. ಬರುವ ದಿನಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುವೆ. ಶಿಕ್ಷಣ ಆರೋಗ್ಯ ಚೆನ್ನಾಗಿ ಇದ್ದರೆ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂದರು.
ತಾಯಿ ಮತ್ತು ಶಿಶು ಮರಣ ಕಡಿಮೆ ಮಾಡಲು ಕ್ರಮ ವಹಿಸಲಾಗುವುದು. ಶಿಕ್ಷಣ ,ಆರೋಗ್ಯ, ಸಾಮಾಜಿಕ ನ್ಯಾಯ ಕೊಡುವುದು ನನ್ನ ಮೊದಲ ಆದ್ಯತೆ. ಮೇವು ಕೊರತೆ ಆಗದಂತೆ ನೋಡಿಕೊಳ್ಳಲು ಪಶು ಸಂಗೋಪನಾ ಇಲಾಖೆಯವರಿಗೆ ಸೂಚಿಸಲಾಗುವುದು ಎಂದರು.