ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದಲ್ಲಿನ ಕಿಶನ್ಗಂಗಾ ಮತ್ತು ರ್ಯಾಟಲ್ ಈ ಎರಡು ಜಲವಿದ್ಯುತ್ ಯೋಜನೆಗಳ ಕುರಿತು ಹೇಗ್ನಲ್ಲಿರುವ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪನ್ನು ಭಾರತ ತಿರಸ್ಕರಿಸಿದ್ದು, ಆದರೆ, ಪಾಕಿಸ್ತಾನ ಸ್ವಾಗತಿಸಿದೆ.
1960ರಲ್ಲಿ ಸಿಂಧೂ ನದಿ ನೀರು ಹಂಚಿಕೆಯ ಮಧ್ಯಸ್ಥಿಕೆ ವಿಚಾರವಾಗಿ ಸ್ಥಾಪಿಸಿದ್ದ ನ್ಯಾಯಾಲಯವನ್ನು ಭಾರತ ಅನಧಿಕೃತ ಎನ್ನುವ ಮೂಲಕ ತನ್ನ ದಿಟ್ಟ ನಿಲುವು ತಿಳಿಸಿದೆ. ಸಿಂಧೂ ನದಿ ಹಂಚಿಕೆ ಒಪ್ಪಂದವನ್ನು ಉಲ್ಲಂಘಿಸಿ ಈ ಕೋರ್ಟ್ ಅನ್ನು ಸ್ಥಾಪಿಸಲಾಗಿತ್ತು ಎಂದು ಭಾರತ ಆರೋಪಿಸಿದೆ.
ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದು ಪಾಕಿಸ್ತಾನ ಹೇಳಿದೆ. ಆದರೆ, ಪಾಕಿಸ್ತಾನದೊಂದಿಗಿನ ವಿವಾದ ಪರಿಹಾರಕ್ಕಾಗಿ ಯಾವುದೇ ಚೌಕಟ್ಟನ್ನು ಗುರುತಿಸಿಲ್ಲ ಎಂದು ಭಾರತ ಈ ತೀರ್ಪನ್ನು ಬಲವಾಗಿ ತಿರಸ್ಕರಿಸಿದೆ.
ಭಾರತವೆಂದೂ ಈ ನ್ಯಾಯಾಲಯವನ್ನು ಅಧಿಕೃತ ಎಂದು ಎಂದಿಗೂ ಪರಿಗಣಿಸಿಲ್ಲ. ನಾವು ಈ ಕೋರ್ಟ್ ತೀರ್ಪನ್ನು ಎಂದಿಗೂ ಒಪ್ಪುವುದಿಲ್ಲ. ಜಮ್ಮು ಮತ್ತು ಕಾಶ್ಮೀರದ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಈ ಕೋರ್ಟ್ ನೀಡಿರುವ ತೀರ್ಪನ್ನು ಅಮಾನ್ಯ ಎಂದು ಪರಿಗಣಿಸಲಾಗುವುದು. ಭಾರತ ಪ್ರತಿ ಸಲವೂ ಈ ನ್ಯಾಯಾಲಯದ ಎಲ್ಲ ತೀರ್ಪನ್ನೂ ನಿರಾಕರಿಸಿದೆ, ಈಗಲೂ ನಿರಾಕರಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿತ್ತು.
ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ನದಿ ನೀರು ಹಂಚಿಕೆಯ ಬಗ್ಗೆ ಯಾವುದಾದರೂ ಪ್ರಕರಣ ದಾಖಲಾದರೆ ಅದನ್ನು ವಿಚಾರಣೆ ನಡೆಸುವ ಅಧಿಕಾರ ಮಾತ್ರ ಈ ನ್ಯಾಯಾಲಯಕ್ಕಿದೆ. ನದಿ ನೀರಿಗೆ ಸಂಬಂಧಿಸಿದ ಯೋಜನೆಗಳನ್ನು ನಿರ್ಧರಿಸುವ ಯಾವ ಅಧಿಕಾರವೂ ಈ ನ್ಯಾಯಾಲಯಕ್ಕಿಲ್ಲ. ಪಾಕಿಸ್ತಾನ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೂ ಸಿಂಧೂ ಜಲ ಒಪ್ಪಂದವನ್ನು ರದ್ದುಪಡಿಸುವುದು ಖಚಿತ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ನ್ಯಾಯಾಲಯದ ತೀರ್ಪೇನು?
ಏಪ್ರಿಲ್ನಲ್ಲಿ ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಅದು ವಿವಾದದ ಬಗ್ಗೆ ತನ್ನ ಸಾಮರ್ಥ್ಯವನ್ನು ಮಿತಿಗೊಳಿಸುವುದಿಲ್ಲ ಮತ್ತು ಅದರ ತೀರ್ಪು ಪಕ್ಷಗಳ ಮೇಲೆ ಬದ್ಧವಾಗಿದೆ ಎಂದು ಮಧ್ಯಸ್ಥಿಕೆ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.