ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭೆಗೆ ಚುನಾವಣಾ(Karnataka Assembly Election 2023) ಅಖಾಡದಲ್ಲಿ ರಾಜಕೀಯ ಲೆಕ್ಕಾಚಾರ ಶುರುವಾಗಿದ್ದು, ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಲ್ಲಿ ಬ್ಯುಸಿಯಾಗಿವೆ.
ಈ ಮಧ್ಯೆ ಬಿಜೆಪಿಯಲ್ಲಿ (BJP) ಮಹತ್ತರವಾದ ಬೆಳವಣಿಗೆ ನಡೆದಿದೆ. ನಟ ಕಿಚ್ಚ ಸುದೀಪ್ (Kichcha Sudeep), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರೊಂದಿಗೆ (CM Basavaraj Bommai) ಜಂಟಿ ಸುದ್ದಿಗೋಷ್ಠಿ ನಡೆಸಿ, ನನ್ನ ಬೆಂಬಲ ಸಿಎಂ ಬೊಮ್ಮಾಯಿಯವರಿಗೆ ಎಂದಿದ್ದಾರೆ.
ಇದೀಗ ಇದುರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ರಾಜ್ಯ ಕಾಂಗ್ರೆಸ್ (Congress) ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದೆ.
‘ಪ್ರಧಾನಿ ನರೇಂದ್ರ ಮೋದಿ ಮುಖ ತೋರಿಸಿದರೂ ವೋಟು ಗಿಟ್ಟುವುದಿಲ್ಲ. ಸಿಎಂ ಬೊಮ್ಮಾಯಿ ಮುಖ ತೋರಿಸಿದರೂ ಮತ ಬರುವುದಿಲ್ಲ. ಹಾಗಾಗಿ ಸಿಎಂ ಬೊಮ್ಮಾಯಿ ಚಿತ್ರನಟರ ಮುಂದೆ ಶರಣಾಗಿದ್ದಾರೆ. ಬಿಜೆಪಿಗೆ ರಾಜಕೀಯ ನಾಯಕರಿಲ್ಲದ ಕಾರಣ ಸಿನಿಮಾ ನಟರ ಮೊರೆ ಹೋಗಿದೆ!. ಬಿಎಸ್ ಯಡಿಯೂರಪ್ಪ ಅವರ ಮುಖವನ್ನು ಮರೆಮಾಚಲು ಬಿಜೆಪಿ ಮುಂದಾಗಿದೆ. ಬಿಜೆಪಿಗೆ ಈಗ ವರ್ಚಸ್ಸು ನಾಯಕರಿಲ್ಲದಿರುವುದು ದುರಂತ ಎಂದು ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಹರಿಹಾಯ್ದಿದೆ.
ಮೋದಿ ಮುಖ ತೋರಿಸಿದರೂ ಓಟು ಗಿಟ್ಟುವುದಿಲ್ಲ, ನನ್ನ ಮುಖ ತೋರಿಸಿದರೂ ಮತ ಬರುವುದಿಲ್ಲ ಎಂದು ಅರಿತುಕೊಂಡ @BSBommai ಅವರು ಚಿತ್ರನಟರ ಮುಂದೆ ಶರಣಾಗಿದ್ದಾರೆ.
ಬಿಜೆಪಿಗೆ ತೋರಿಸಲು ರಾಜಕೀಯ ನಾಯಕರಿಲ್ಲದ ಕಾರಣ ಸಿನೆಮಾ ನಾಯಕರ ಮೊರೆ ಹೋಗಿದೆ!
BSY ಮುಖವನ್ನು ಮರೆಮಾಚಲು ಮುಂದಾದ ಬಿಜೆಪಿಗೆ ಈಗ ವರ್ಚಸ್ವಿ ನಾಯಕರಿಲ್ಲದಿರುವುದು ದುರಂತ!
— Karnataka Congress (@INCKarnataka) April 5, 2023
ಇನ್ನು ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ ಕಲಾವಿದರು ತಮಗೆ ಬೇಕಾದವರನ್ನು ಚುನಾವಣೆಯಲ್ಲಿ ಬೆಂಬಲಿಸ್ತಾರೆ. ಇದರಿಂದ ನಮಗೆ ಯಾವುದೇ ಅಭ್ಯಂತರವಿಲ್ಲ. ಸರ್ಕಾರ ಸಿನಿಮಾ ನಟರ ಮೇಲೆ ಒತ್ತಡ ಹಾಕಿರಬಹುದು ಅಥವಾ ನಟರ ಬಳಿ ಮನವಿ ಮಾಡಿಕೊಂಡಿರಬಹುದು. ರಾಜಕಾರಣದ ಉದ್ದೇಶದಿಂದ ನಾನು ಸುದೀಪ್ ಭೇಟಿಯಾಗಿಲ್ಲ. ನಾನು ಮತ್ತು ನಟ ಸುದೀಪ್ ಹಳೇ ಸ್ನೇಹಿತರು. ನನ್ನ ಮತ್ತು ಸುದೀಪ್ ನಡುವೆ ರಾಜಕೀಯ ಚರ್ಚೆ ನಡೆದಿಲ್ಲ ಎಂದಿದ್ದಾರೆ.