ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭೆಗೆ ಇಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಓಬ್ರಿಯಾನ್ (Derek O’Brien) ಸೇರಿದಂತೆ 11 ನಾಯಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೀಗಾಗಿ ಜುಲೈ 24 ರಂದು ಪಶ್ಚಿಮ ಬಂಗಾಳದಲ್ಲಿ ಆರು, ಗುಜರಾತ್ನಲ್ಲಿ ಮೂರು ಮತ್ತು ಗೋವಾದಲ್ಲಿ ಒಂದು ಸ್ಥಾನಕ್ಕೆ ನಡೆಯಬೇಕಿದ್ದ ಮತದಾನ ನಡೆಯುವುದಿಲ್ಲ. ಆರು ತೃಣಮೂಲ ಕಾಂಗ್ರೆಸ್ ಮತ್ತು ಐದು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ಇತರ ತೃಣಮೂಲ ಕಾಂಗ್ರೆಸ್ ನಾಯಕರೆಂದರೆ ಸುಖೇಂದು ಶೇಖರ್ ರಾಯ್, ಡೋಲಾ ಸೇನ್, ಸಾಕೇತ್ ಗೋಖಲೆ, ಸಮೀರುಲ್ ಇಸ್ಲಾಂ ಮತ್ತು ಪ್ರಕಾಶ್ ಬಾರಿಕ್. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಕಳೆದುಕೊಂಡು ಸದಸ್ಯರ ಸಂಖ್ಯೆ 30 ಕ್ಕೆ ಇಳಿಯಲಿದೆ.
245 ಸದಸ್ಯರ ರಾಜ್ಯಸಭೆಯಲ್ಲಿ ಏಳು ಸ್ಥಾನಗಳು ಜುಲೈ 24 ರ ನಂತರ ತೆರವಾಗಲಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ಸ್ಥಾನಗಳು, ಎರಡು ನಾಮನಿರ್ದೇಶಿತ ಸ್ಥಾನಗಳು ಮತ್ತು ಉತ್ತರ ಪ್ರದೇಶದಲ್ಲಿ ಒಂದು ಸ್ಥಾನ ಖಾಲಿ ಇರಲಿದೆ.
ರಾಜ್ಯಸಭೆಯಲ್ಲಿ ಒಟ್ಟು ಸ್ಥಾನಗಳು 238ಕ್ಕೆ ಇಳಿಯಲಿದ್ದು, ಬಹುಮತದ ಸಂಖ್ಯೆ 120 ಆಗಲಿದೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 105 ಸದಸ್ಯರನ್ನು ಹೊಂದಿದ್ದು, ಐವರು ನಾಮನಿರ್ದೇಶಿತ ಮತ್ತು ಇಬ್ಬರು ಸ್ವತಂತ್ರ ಸಂಸದರ ಬೆಂಬಲವನ್ನೂ ಬಿಜೆಪಿ ಗೆಲ್ಲುವುದು ನಿಶ್ಚಿತ. ಹಾಗಾಗಿ ಸರ್ಕಾರದ ಪರವಾಗಿ ಇರುವ ಸದಸ್ಯರ ಸಂಖ್ಯೆ 112 ಆಗಲಿದ್ದು, ಬಹುಮತಕ್ಕೆ ಎಂಟು ಸ್ಥಾನ ಕಮ್ಮಿ ಇದೆ.