ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇತ್ತೀಚೆಗೆ 7 ಚಿರತೆ ಮರಿಗಳ ಸಾವು ಆತಂಕವನ್ನು ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಇದೀಗ 13 ಜಿಂಕೆಗಳು ಮೃತಪಟ್ಟಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಒಂದೆಡೆ ಮಾರಣಾಂತಿಕ ವೈರಸ್ ದಾಳಿ ಪ್ರಾಣಿಗಳ ಸಾವಿಗೆ ಕಾರಣವಾದರೆ ಇನ್ನೊಂದೆಡೆ ಗುಂಪಿಗೆ ಸೇರುವ ಹಂತದಲ್ಲಿನ ಹೊಡೆದಾಟ, ಜಂತುಹುಳು ಸಮಸ್ಯೆ ಜೀವನಕ್ಕೆ ಎರವಾಗುತ್ತಿದೆ ಎಂಬ ಗಂಭೀರ ಅಂಶ ಈಗ ಬೆಳಕಿಗೆ ಬಂದಿದೆ.
ತಿಂಗಳ ಹಿಂದಷ್ಟೇ ಬೆಂಗಳೂರು ಸೆಂಟ್ ಜಾನ್ಸ್ ಆಸ್ಪತ್ರೆ ಉದ್ಯಾನದಲ್ಲಿದ್ದ 37 ಜಿಂಕೆಗಳನ್ನು ಬನ್ನೇರುಘಟ್ಟ ಉದ್ಯಾನವನಕ್ಕೆ ತರಲಾಗಿತ್ತು. ಹತ್ತು ದಿನದ ಕ್ವಾರಂಟೈನ್ ಬಳಿಕ ಸಫಾರಿಗೆ ಬಿಡಲಾಗಿತ್ತು. ಅವುಗಳಲ್ಲಿ ಹಲವು ಕಾರಣಗಳಿಂದ 13 ಜಿಂಕೆಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಬನ್ನೇರುಘಟ್ಟ ಉದ್ಯಾನವನದಲ್ಲಿ ಮಾರಣಾಂತಿಕ ವೈರಸ್ ಫೆಲೈನ್ ಪ್ಯಾನ್ ಲ್ಯುಕೋಪೆನಿಯಾ ದಿಂದಾಗಿ 7 ಚಿರತೆ ಮರಿಗಳು ಸಾವನ್ನಪ್ಪಿದ್ದವು. ಈ ಹಿನ್ನೆಲೆಯಲ್ಲಿ ಉದ್ಯಾನವನದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆಯೇ ಜಿಂಕೆಗಳು ಸಾವನ್ನಪ್ಪಿದ್ದು, ಉದ್ಯಾನವನದಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.