ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್ಲೈನ್ ಮೂಲಕ ಡ್ರಮ್ ಉತ್ಪನ್ನಗಳನ್ನು ಪೂರೈಸುವುದಾಗಿ ನಂಬಿಸಿ ಹಣ ಪಡೆದುಕೊಂಡು ಕೃಷಿ ಉಪಕರಣಗಳನ್ನು ಪೂರೈಸದೆ ವಂಚಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದ್ದು, ಈ ಬಗ್ಗೆ ನಗರದ ನರಿಮೊಗರು ನಿವಾಸಿ ಗಣೇಶ್ ಪ್ರಭು ಎಂಬವರು ಈ ಕುರಿತು ದೂರು ನೀಡಿದ್ದಾರೆ.
ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ, ಅಗ್ರೋ ಉತ್ಪನ್ನಗಳನ್ನು ಕೃಷಿಕರಿಗೆ ಮಾರಾಟ ಮಾಡುತ್ತಿದ್ದು, ಯುನಿಟಿ ಪಾಲಿ ಬ್ಯಾರೆಲ್ಸ್ ಪ್ರೈವೇಟ್ ಲಿಮಿಟೆಡ್ ಅಶೋಕ ನಗರ, ಶಿವಾಜಿ ನಗರ, ಪುಣೆ, ಮಹಾರಾಷ್ಟ್ರ ಎಂಬ ಹೆಸರಿನಿಂದ ಗಣೇಶ್ ಪ್ರಭು ಅವರನ್ನು ಸಂಪರ್ಕಿಸಿದ ಅಪರಿಚಿತ ಆರೋಪಿತರು, ಆನ್ ಲೈನ್ ಮುಖಾಂತರ ಡ್ರಮ್ ಉತ್ಪನ್ನಗಳನ್ನು ಮಾರಾಟ ಮಾಡುವುದಾಗಿ ನಂಬಿಸಿ ಮೇ 8 ರಿಂದ ಮೇ 10ರ ಮಧ್ಯಾಹ್ನ ಅವಧಿಯಲ್ಲಿ, ಪಿರ್ಯಾದಿದಾರರಿಂದ ಮೊಬೈಲ್ ಸಂಖ್ಯೆಗೆ ರೂ.1,30,500 ಹಣವನ್ನು ಮೂರು ಹಂತಗಳಲ್ಲಿ ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದರು.
ಆದರೆ ಹಣ ಪಡೆದುಕೊಂಡವರು ಈವರೆಗೆ ಡ್ರಮ್ ಮೆಟಿರಿಯಲ್ ಗಳನ್ನು ಕಳುಹಿಸಿಕೊಟ್ಟಿರುವುದಿಲ್ಲ ಎಂದು ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.