ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ದೇಶದ ಹಲವೆಡೆ ಸುರಿದ ಭಾರೀ ಮಳೆಗೆ ಸಾವು-ನೋವು ವರದಿಯಾಗಿದೆ. ಆಲಿಕಲ್ಲು, ಗುಡುಗು-ಸಿಡಿಲು ಸಹಿತ ಅಬ್ಬರಿಸಿದ ಮಳೆಗೆ ಅಪಾರ ಪ್ರಾಣಹಾನಿ ಉಂಟಾಗಿದ್ದು, ಇಂದೂ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಆಲಿಕಲ್ಲು ಮಳೆಗೆ 14 ಮಂದಿ ಸಾವು
ಗುಜರಾತ್ನಲ್ಲಿ ಭಾನುವಾರ ಸುರಿದ ಆಲಿಕಲ್ಲು ಮಳೆಗೆ 14 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಮನೆ-ಬೆಳೆಗಳಿಗೂ ಭಾರೀ ಹಾನಿಯಾಗಿದೆ. ಗುಜರಾತ್ನ 220 ತಾಲ್ಲೂಕುಗಳಲ್ಲಿ 50 ಮಿ.ಮೀ.ವರೆಗೆ ಮಳೆ ಬಿದ್ದಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಬಿರುಗಾಳಿ ಸಹಿತ ರಭಸದ ಗಾಳಿಗೆ ಮರಗಳು ಉರುಳಿ ಬಿದ್ದಿವೆ.
ಗುಡುಗು ಸಹಿತ ಭಾರೀ ಮಳೆಗೆ ಜೀವಹಾನಿ
ಸಿಡಿಲು ಬಡಿದು ದಾಹೋದ್ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಭರೂಚ್ನಲ್ಲಿ ಇಬ್ಬರು, ಸೂರತ್, ದ್ವಾರಕಾ, ಪಂಚಮಹಲ್, ಸುರೇಂದ್ರನಗರ, ಅಮ್ರೇಲಿ, ಖೇಡಾ, ಅಹಮದಾಬಾದ್ ಗ್ರಾಮಾಂತರ, ಸಬರ್ಕಾಂತ ಮತ್ತು ಬೋಟಾಡ್ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ವಿವಿಧೆಡೆ ಸಿಡಿಲು ಬಡಿದು 40 ಪ್ರಾಣಿಗಳು ಬಲಿಯಾಗಿವೆ. ಭಾರೀ ಮಳೆಯಿಂದಾಗಿ ರಾಜ್ಕೋಟ್ನ ಖಂಡೇರಿ ಕ್ರಿಕೆಟ್ ಸ್ಟೇಡಿಯಂಗೆ ತೀವ್ರ ಹಾನಿಯಾಗಿದೆ. ಕ್ರೀಡಾಂಗಣಕ್ಕೆ 2 ಕೋಟಿ ರೂ.ವರೆಗೆ ಹಾನಿಯಾಗಬಹುದು ಎಂದು ಅಂದಾಜಿಸಲಾಗಿದೆ.
ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವಂತೆ ಗುಜರಾತ್ ಸರ್ಕಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ಅಧಿಕೃತ ಭೇಟಿಗಾಗಿ ಜಪಾನ್ನಲ್ಲಿರುವ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೃಷಿ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ರೈತರಿಗೆ ಆಗಿರುವ ನಷ್ಟದ ಕುರಿತು ಚರ್ಚಿಸಿದರು. ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸುವಂತೆಯೂ ಸರ್ಕಾರ ಆದೇಶ ಹೊರಡಿಸಿದೆ.