ಹೊಸ ದಿಗಂತ ವರದಿ, ಕುಶಾಲನಗರ:
ಕೊಡಗು ಹಾಗೂ ಕೇರಳ ರಾಜ್ಯಕ್ಕೆ ಗಾಂಜಾ ಮತ್ತು ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಪ್ರಮುಖ ಪೆಡ್ಲರ್ ಸೇರಿದಂತೆ ಒಟ್ಟು 17ಮಂದಿಯನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 13.5 ಕೆ.ಜಿ.ಗಾಂಜಾ 19.5 ಗ್ರಾಂ ಎಂಡಿಎಂಎ, 14 ಮೊಬೈಲ್’ಗಳು ಎರಡು ಆಟೋ, ಎರಡು ಸ್ಕೂಟಿ, ಒಂದು ಮಾರುತಿ 800 ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಮುಖ ಪೆಡ್ಲರ್ ಒರಿಸ್ಸಾ ರಾಜ್ಯದ ಜೈಪುರದ ಬಾಲಿಪಾಡಿಯಾ ಗ್ರಾಮದ ಎಂ.ಸೂರ್ಯಕಾಂತ್ (37) ಅಲಿಯಾಸ್ ಗೋಬಿ ಸೂರಿ, ಗಾಂಜಾ ಮಾರಾಟ ಮತ್ತು ಸೇವನೆಯಲ್ಲಿ ತೊಡಗಿದ್ದ ಸುಂಟಿಕೊಪ್ಪದ ರಫೀಕ್, ಅಭಿಷೇಕ್, ಮಹಮ್ಮದ್ ಮಕ್ರಾಂ, ನಯನ್, ಮೂರ್ನಾಡುವಿನ ಅತೀಕ್ ಸೇರಿದಂತೆ 17ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.
ಕುಶಾಲನಗರದ ಡಿವೈಎಸ್ಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೆ.ರಾಮರಾಜನ್, ಗಾಂಜಾ ಪೆಡ್ಲರ್ ಗೋಬಿ ಸೂರ್ಯ ಈ ಹಿಂದೆ 15 ವರ್ಷ ವೀರಾಜಪೇಟೆಯಲ್ಲಿ ಗೋಬಿ ಅಂಗಡಿ ನಡೆಸುತ್ತಿದ್ದು, ಆಟೋ ಕೂಡಾ ಓಡಿಸುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ಮೈಸೂರು ಜಿಲ್ಲೆಯ ಬೈಲುಕೊಪ್ಪ ವ್ಯಾಪ್ತಿಯಲ್ಲಿ ವಾಸವಾಗಿದ್ದು, ಇಲ್ಲೂ ಗೋಬಿ ಅಂಗಡಿ ನಡೆಸುತ್ತಿದ್ದ. ಒರಿಸ್ಸಾದಿಂದ ಬಸ್ ಮೂಲಕ ಗಾಂಜಾ ಮತ್ತು ಎಂಡಿಎಂಎ ತರಿಸಿ ತನ್ನ ಸಂಗಡಿಗರ ಮೂಲಕ ಎಲ್ಲೆಡೆ ಗಾಂಜಾ ಪೂರೈಕೆ ಮಾಡುತ್ತಿದ್ದ ಎಂದು ವಿವರಿಸಿದರು.
ಕುಶಾಲನಗರ ನಗರ, ಗ್ರಾಮಾಂತರ, ಸುಂಟಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 5 ಪ್ರಕರಣ ದಾಖಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಸುಂದರರಾಜ್, ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಮಹೇಶ್ ಕುಶಾಲನಗರ, ಸುಂಟಿಕೊಪ್ಪ ಠಾಣಾಧಿಕಾರಿಗಳಾದ ರವೀಂದ್ರ, ಮೋಹನ್ ರಾಜ್, ಶ್ರೀಧರ್, ಎಎಸ್ಐ ವೆಂಕಟೇಶ್, ಸಿಬ್ಬಂದಿಗಳಾದ ಸತೀಶ್, ದಿನೇಶ್ ಕುಮಾರ್, ಪ್ರಕಾಶ್, ಸಂದೀಪ್ ರೈ, ಪ್ರವೀಣ, ಪ್ರಿಯ ಕುಮಾರ್, ದಿನೇಶ್, ರಂಜಿತ್, ಸಂಪತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.