ಕಿತ್ತೂರು ರಾಣಿ ಚೆನ್ನಮ್ಮ ಸಂಗ್ರಾಮಕ್ಕೆ 200 ವರ್ಷ: ಅಂಚೆ ಚೀಟಿ ಬಿಡುಗಡೆಗೆ ಕೇಂದ್ರ ಸರಕಾರ ನಿರ್ಧಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಅವರು ಸಾರಿದ ಸಂಗ್ರಾಮಕ್ಕೆ 200 ವರ್ಷ ತುಂಬಿದ ಹಿನ್ನೆಲೆ ಅ.23ರಂದು ಚೆನ್ನಮ್ಮ ಅಂಚೆ ಚೀಟಿ ಬಿಡುಗಡೆಗೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.

ವಿಜಯದ ಜ್ಞಾಪಕಾರ್ಥವಾಗಿ ರಾಣಿ ಚೆನ್ನಮ್ಮ ಅಂಚೆ ಚೀಟಿ ಬಿಡುಗಡೆ ಮಾಡಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಇದೇ ಅಕ್ಟೋಬರ್ 23ಕ್ಕೆ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮನವರು ಬ್ರಿಟಿಷರ ವಿರುದ್ಧ ಸಾರಿದ ಸಂಗ್ರಾಮದ ವಿಜಯಕ್ಕೆ 200 ವರ್ಷ ಸಂದಲಿವೆ. ಈ ಐತಿಹಾಸಿಕ ವಿಜಯದ ಜ್ಞಾಪಕಾರ್ಥವಾಗಿ ರಾಣಿ ಚೆನ್ನಮ್ಮನವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದಿದ್ದಾರೆ.

ಇದೇ ಅಕ್ಟೋಬರ್ 23 ಕ್ಕೆ, ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮನವರು ಬ್ರಿಟಿಷರ ವಿರುದ್ಧ ಸಾರಿದ ಸಂಗ್ರಾಮದ ವಿಜಯಕ್ಕೆ 200 ವರ್ಷ ಸಂದಲಿದೆ. ಈ ಐತಿಹಾಸಿಕ ವಿಜಯದ ಜ್ಞಾಪಕಾರ್ಥವಾಗಿ ರಾಣಿ ಚೆನ್ನಮ್ಮನವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವಂತೆ ಕಿತ್ತೂರು ಕರ್ನಾಟಕ ನಿಯೋಗದ ಪ್ರಮುಖರು, ರಾಜ್ಯಸಭಾ ಸಂಸದರಾದ ಈರಣ್ಣ ಕರಡಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಅರವಿಂದ ಬೆಲ್ಲದ್​, ಅಭಯ್ ಪಾಟೀಲ್​ ಮತ್ತು ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಪ್ರಮುಖರೊಂದಿಗೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಆಗ್ರಹಿಸಲಾಗಿತ್ತು. ಬಳಿಕ ತಕ್ಷಣವೇ ರಾಣಿ ಚೆನ್ನಮ್ಮನ ಅಂಚೆ ಚೀಟಿಯನ್ನು ಇದೇ ಅಕ್ಟೋಬರ್ 23ಕ್ಕೆ ಬಿಡುಗಡೆ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ಮೋದಿ ಸರ್ಕಾರದ ತ್ವರಿತ ನಿರ್ಧಾರ ಹಾಗೂ ಕಾರ್ಯರೂಪಕ್ಕೆ ಇದು ಕೈಗನ್ನಡಿ ಎಂದು ಹೇಳಿದ್ದಾರೆ.

ಇದು ಭಾರತ ಸರ್ಕಾರವು ರಾಣಿ ಚೆನ್ನಮ್ಮನಿಗೆ ಸಲ್ಲಿಸುತ್ತಿರುವ ಗೌರವ. ಈ ತ್ವರಿತ ನಿರ್ಧಾರ ಕೈಗೊಂಡ ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಕೇಂದ್ರ ಸಂವಹನಾ ಸಚಿವಾಲಯಕ್ಕೆ ಪ್ರಲ್ಹಾದ್​ ಜೋಶಿ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!