ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ನ್ಯಾಯಾಂಗ ಅಧಿಕಾರಿಯ ಪತ್ನಿ,ಮಾಜಿ ನ್ಯಾಯಾಧೀಶರ ಸೊಸೆ ಗೀತಾಂಜಲಿ ಗುರುಗ್ರಾಮ್ನಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು, ಗುರುಗ್ರಾಮ್ನ ಮಾಜಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ರವನೀತ್ ಗಾರ್ಗ್ ಮತ್ತು ಅವರ ಪೋಷಕರಾದ ನಿವೃತ್ತ ಸೆಷನ್ಸ್ ನ್ಯಾಯಾಧೀಶರಾದ ಕೆ.ಕೆ ಗಾರ್ಗ್ ಮತ್ತು ರಚನಾ ಗಾರ್ಗ್ ಅವರನ್ನು 2013ರ ಗೀತಾಂಜಲಿ ಗಾರ್ಗ್ ಅವರ ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ಖುಲಾಸೆಗೊಳಿಸಿದೆ. 12 ವರ್ಷಗಳ ಕಾಲ ನಡೆದ ಕಾನೂನು ಹೋರಾಟ ಇದೀಗ ಅಂತ್ಯವಾಗಿದೆ.
ಜುಲೈ 17, 2013ರಂದು ಗುರುಗ್ರಾಮ್ನ ಪೊಲೀಸ್ ಲೈನ್ಸ್ ಪೆರೇಡ್ ಮೈದಾನದಲ್ಲಿ ರವನೀತ್ ಅವರ ಪತ್ನಿ ಗೀತಾಂಜಲಿ ಗಾರ್ಗ್ (28) ಅವರ ಶವ ಪತ್ತೆಯಾಗಿತ್ತು. ಅವರಿಗೆ 4 ಗುಂಡುಗಳು ತಗುಲಿದ್ದವು. ಆ ಶವದ ಬಳಿ ರವನೀತ್ ಗರ್ಗ್ ಅವರ ಲೈಸೆನ್ಸ್ ಪಡೆದ ರಿವಾಲ್ವರ್ ಪತ್ತೆಯಾಗಿತ್ತು. ನ್ಯಾಯಾಂಗದಲ್ಲಿ ರವನೀತ್ ಅವರ ಸ್ಥಾನ ಮತ್ತು ಶವ ಪತ್ತೆಯಾದ ಸಂದರ್ಭಗಳಿಂದಾಗಿ ಈ ಸಾವು ವ್ಯಾಪಕ ಗಮನ ಸೆಳೆದಿತ್ತು.
ಮೊದಲು ಈ ಘಟನೆಯನ್ನು ಆತ್ಮಹತ್ಯೆ ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸಿದರು. ಆದರೆ ಹರಿಯಾಣ ಸರ್ಕಾರ ಸ್ವತಂತ್ರ ತನಿಖೆಗೆ ಶಿಫಾರಸು ಮಾಡಿದ ನಂತರ ಈ ತನಿಖೆಯನ್ನು ಆಗಸ್ಟ್ 2013ರಲ್ಲಿ ಸಿಬಿಐಗೆ ವರ್ಗಾಯಿಸಲಾಯಿತು. 2016ರಲ್ಲಿ ಸಲ್ಲಿಸಲಾದ ತನ್ನ ಚಾರ್ಜ್ಶೀಟ್ನಲ್ಲಿ ಸಿಬಿಐ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಆರೋಪವನ್ನು ಕೈಬಿಟ್ಟಿತು. ಅದರ ಬದಲಿಗೆ ವರದಕ್ಷಿಣೆ ಸಾವು, ಕ್ರಿಮಿನಲ್ ಪಿತೂರಿ ಮತ್ತು ಕ್ರೌರ್ಯಕ್ಕೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ ಕೇಸ್ ಮುಂದುವರೆಸಿತು.
ಗೀತಾಂಜಲಿ ಅವರ ಸಹೋದರ, ಪ್ರಮುಖ ದೂರುದಾರ ಮತ್ತು ಪ್ರಮುಖ ಪ್ರಾಸಿಕ್ಯೂಷನ್ ಸಾಕ್ಷಿ ಪ್ರದೀಪ್ ಅಗರ್ವಾಲ್ ವಿಚಾರಣೆಯ ಸಮಯದಲ್ಲಿ ಪ್ರತಿಕೂಲವಾಗಿ ತಿರುಗಿದಾಗ ಪ್ರಾಸಿಕ್ಯೂಷನ್ ಪ್ರಕರಣವು ದೊಡ್ಡ ಹಿನ್ನಡೆಯನ್ನು ಅನುಭವಿಸಿತು. ಜುಲೈ 2018ರಲ್ಲಿ ನೀಡಿದ ತಮ್ಮ ಸಾಕ್ಷ್ಯದಲ್ಲಿ ಅಗರ್ವಾಲ್ ತಮ್ಮ ಹಿಂದಿನ ಆರೋಪಗಳನ್ನು ಹಿಂತೆಗೆದುಕೊಂಡರು. ಮದುವೆಯಲ್ಲಿ ಭಿನ್ನಾಭಿಪ್ರಾಯ ಅಥವಾ ಕ್ರೌರ್ಯದ ಯಾವುದೇ ಪುರಾವೆಗಳಿಲ್ಲ ಎಂದು ಪ್ರತಿವಾದಿಗಳು ವಾದಿಸಿದರು.
ಈ ಪ್ರಕರಣವು 9 ವರ್ಷಗಳ ಕಾಲ ವಿಚಾರಣೆಗೆ ಒಳಗಾಯಿತು, ಆದರೆ ಗೀತಾಂಜಲಿಯನ್ನು ಅವರ ನ್ಯಾಯಾಧೀಶ ಪತಿ ರವನೀತ್ ಗರ್ಗ್, ಮಾವ ಮತ್ತು ಅತ್ತೆ ಕೊಲೆ ಮಾಡಿದ್ದಾರೆ ಎಂದು ಸಾಬೀತುಪಡಿಸಲು ಸಿಬಿಐಗೆ ಸಾಧ್ಯವಾಗಲಿಲ್ಲ. ಹೀಗಾಗಿ ಸಿಬಿಐ ನ್ಯಾಯಾಲಯವು ಮೂವರನ್ನೂ ಖುಲಾಸೆಗೊಳಿಸಿತು.

