ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೆ, ಹಿಮಾಚಲ ಪ್ರದೇಶದಲ್ಲಿ ಮಳೆ ಮತ್ತು ಪ್ರವಾಹದಿಂದ ಜನರು ಇನ್ನೂ ನರಳುತ್ತಿದ್ದಾರೆ. ಪ್ರವಾಸಿ ತಾಣವಾಗಿ, ಸುಂದರವಾಗಿರುವ ಹಿಮಾಚಲ ಪ್ರದೇಶ ಅವಶೇಷಗಳ ಕೂಪವಾಗಿ ಕಾಣಿಸುತ್ತಿದೆ. ಮಳೆ ಮತ್ತು ಪ್ರವಾಹದಿಂದಾಗಿ ಇದುವರೆಗೆ ದೇಶಾದ್ಯಂತ 2,038 ಜನರು ಸಾವನ್ನಪ್ಪಿದ್ದಾರೆ. 335 ಜಿಲ್ಲೆಗಳು ಮಳೆಯಿಂದ ಬಾಧಿತವಾಗಿವೆ.
ಮಳೆ, ಪ್ರವಾಹ, ಬಿರುಗಾಳಿ ಮತ್ತು ಭೂಕುಸಿತದಿಂದ 2,038 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಿಹಾರದಲ್ಲಿ ಅತಿ ಹೆಚ್ಚು 518 ಜನರು ಮತ್ತು ಹಿಮಾಚಲ ಪ್ರದೇಶದಲ್ಲಿ 330 ಜನರು ಸಾವನ್ನಪ್ಪಿರುವುದಾಗಿ ಕೇಂದ್ರ ಗೃಹ ಸಚಿವಾಲಯ ಈ ಕುರಿತು ವಿವರ ಪ್ರಕಟಿಸಿದೆ.
ಕೇಂದ್ರ ಗೃಹ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಏಪ್ರಿಲ್ 1 ರಿಂದ ಆಗಸ್ಟ್ 17 ರವರೆಗೆ ಮಳೆ ಮತ್ತು ಪ್ರವಾಹದಲ್ಲಿ 101 ಜನರು ನಾಪತ್ತೆಯಾಗಿದ್ದಾರೆ ಮತ್ತು 1,584 ಜನರು ಗಾಯಗೊಂಡಿದ್ದಾರೆ. ಮಳೆ, ಭೂಕುಸಿತ ಮತ್ತು ಗುಡುಗು ಸಹಿತ ಮಳೆಯಿಂದಾಗಿ 335 ಜಿಲ್ಲೆಗಳು ಹಾನಿಗೊಳಗಾಗಿವೆ. ಅವುಗಳಲ್ಲಿ 40 ಮಧ್ಯಪ್ರದೇಶದಲ್ಲಿ, 30 ಅಸ್ಸಾಂನಲ್ಲಿ ಮತ್ತು 27 ಉತ್ತರ ಪ್ರದೇಶದಲ್ಲಿವೆ ಹಿಮಾಚಲ ಪ್ರದೇಶದ 12 ಜಿಲ್ಲೆಗಳು ಮತ್ತು ಉತ್ತರಾಖಂಡದ 7 ಜಿಲ್ಲೆಗಳು ಮುಂಗಾರು ಮಳೆ ಮತ್ತು ಪ್ರವಾಹದಿಂದಾಗಿ ಭೂಕುಸಿತವನ್ನು ಅನುಭವಿಸಿವೆ.
ಸಿಡಿಲಿಗೆ 506 ಮಂದಿ ಬಲಿಯಾಗಿದ್ದರೆ, ಭೂಕುಸಿತದಿಂದ 186 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಳೆಗಾಲದಲ್ಲಿ ವಿವಿಧ ಕಾರಣಗಳಿಂದ 454 ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್ನಲ್ಲಿ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ 165 ಜನರು, ಮಧ್ಯಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ 138 ಜನರು ಸಾವನ್ನಪ್ಪಿದ್ದಾರೆ.
ಜನರ ರಕ್ಷಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಒಟ್ಟು 160 ತಂಡಗಳನ್ನು ವಿವಿಧ ರಾಜ್ಯಗಳಲ್ಲಿ ನಿಯೋಜಿಸಲಾಗಿದೆ. ಅವುಗಳಲ್ಲಿ ಹಿಮಾಚಲ ಪ್ರದೇಶದಲ್ಲಿ 17, ಮಹಾರಾಷ್ಟ್ರದಲ್ಲಿ 14, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 12, ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ 10 ಮತ್ತು ಉತ್ತರಾಖಂಡದಲ್ಲಿ 9 ತಂಡಗಳನ್ನು ನಿಯೋಜಿಸಲಾಗಿದೆ.