ಹೊಸದಿಗಂತ ಚಿಕ್ಕಮಗಳೂರು:
ವೃದ್ಧೆಯೊಬ್ಬರ ಕೊರಳಿನಲ್ಲಿದ್ದ 38 ಗ್ರಾಂ. ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಎನ್ಆರ್ಪುರ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದ ಚಿಪ್ಸ್ ವ್ಯಾಪಾರ ಮಾಡುವ ಸಾಗರ್ ಮತ್ತು ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರಿನ ಮಾರಶೆಟ್ಟಿಹಳ್ಳಿ ರಾಕೇಶ್ ಬಂಧಿತ ಆರೋಪಿಗಳಾಗಿದ್ದಾರೆ.
ಜೂನ್ 20ರಂದು ಬೆಳಗಿನ ಜಾವ ನ.ರಾ.ಪುರ ಪಟ್ಟಣದ ಕುರುಕುಬಳ್ಳಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಹತ್ತಿರ ವಾಕ್ ಮಾಡುತ್ತಿದ್ದ 64 ವರ್ಷ ವಯಸ್ಸಿನ ಒಂಟಿ ಮಹಿಳೆಯ ಕುತ್ತಿಗೆಯಲ್ಲಿದ್ದ 38ಗ್ರಾಂ ಬಂಗಾರದ ಸರವನ್ನು ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದರು.
ಆರೋಪಿಗಳು ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಸರಗಳ್ಳತನ ಮಾಡಿದ್ದು ಎಲ್ಲಾ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಭದ್ರಾವತಿಯಲ್ಲಿ ಕಳವು ಮಾಡಲಾಗಿದ್ದ ಒಂದು ಮೋಟಾರ್ ಸೈಕಲ್ ಜೊತೆಗೆ ವಿವಿಧೆಡೆ ಅಪಹರಿಸಲಾಗಿದ್ದ 7.50 ಲಕ್ಷ ಮೌಲ್ಯದ 69ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.