ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಜನನಿಬಿಡ ಪ್ರದೇಶಗಳಲ್ಲಿ ಶಂಕಿತ ಭಯೋತ್ಪಾದಕರು ಉಗ್ರ ಕೃತ್ಯವೆಸಗಲು ಸಂಗ್ರಹಿಸಿ ಬಚ್ಚಿಟ್ಟಿದ್ದ ನಾಲ್ಕು ಜೀವಂತ ಹ್ಯಾಂಡ್ ಗ್ರೆನೇಡ್ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ. ಹೀಗಾಗಿ, ಇಲ್ಲಿನ ಸ್ಥಳೀಯರಲ್ಲಿ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.
ಪ್ರಕರಣದ ಐದನೇ ಆರೋಪಿ ಜಾಯೇದ್ ತಬ್ರೆಸ್ನ ಕೊಡಿಗೆಹಳ್ಳಿಯ ಮನೆಯ ಅಲ್ಮೇರಾದಲ್ಲಿ ಬಚ್ಚಿಟ್ಟಿದ್ದ ನಾಲ್ಕು ಹ್ಯಾಂಡ್ ಗ್ರೆನೇಡ್ಗಳನ್ನ ಸಿಸಿಬಿ ವಶಪಡಿಸಿಕೊಂಡಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿರುವುದು ತಿಳಿದುಬಂದಿದೆ.
2021 ರಲ್ಲಿ ಉಪ್ಪಿನಂಗಡಿ ಬಳಿ ಐದು ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದ್ದವು. ನೆಲದಡಿ ದೊರೆತಿದ್ದ 40 ವರ್ಷದಷ್ಟು ಹಳೆಯ ಗ್ರೆನೇಡ್ಗಳು ಇವಾಗಿದ್ದವು. ನಂತರ 2022ರಲ್ಲಿ ಅಥಣಿ ಬಳಿಯ ಶಾಲೆಯೊಂದರಲ್ಲಿ ಒಂದು ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿತ್ತು. ವಿದ್ಯಾರ್ಥಿಗಳು ಚೆಂಡು ಎಂದು ಆಟವಾಡುವಾಗ ನಿರ್ಜೀವ ಸ್ಥಿತಿಯಲ್ಲಿ ಗ್ರೆನೇಡ್ ಇದಾಗಿದ್ದವು. ಇದಾದ ಬಳಿಕ ರಾಜಧಾನಿಯಲ್ಲೇ ಭಾರಿ ಪ್ರಮಾಣದ ನಾಲ್ಕು ಜೀವಂತ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ.
ಐವರು ಶಂಕಿತ ಉಗ್ರರ ಬಂಧನ ಪ್ರಕರಣದಲ್ಲಿ ಶಂಕಿತ ಉಗ್ರರಿಗೆ ಇಸ್ಲಾಂ ಮೂಲಭೂತವಾದದ ಬಗ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಟಿ. ನಜೀರ್ ಬೋಧನೆ ಮಾಡಿದ್ದ. ಈತ ಪ್ರಕರಣದ ರೂವಾರಿ ಎಂಬುವುದು ತನಿಖೆ ವೇಳೆ ಕಂಡುಬಂದಿದ್ದು, ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿ ಪರಿಗಣಿಸಲು ಸಿಸಿಬಿ ನಿರ್ಧರಿಸಿದೆ. ಶಂಕಿತರ ಹೇಳಿಕೆ ಆಧರಿಸಿ ವಾರಂಟ್ ಮೇರೆಗೆ ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ಪಡೆಯಲು ಸಿದ್ದತೆ ನಡೆಸುತ್ತಿದೆ.