ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ, ವ್ಯಕ್ತಿಯೊಬ್ಬರಿಗೆ 5 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ಕೊರಟಿಗೆರೆ ತಾಲೂಕಿನ ಚಿಂಪುಗಾನಹಳ್ಳಿಯ ನಿವಾಸಿ ರಂಗನಾಥ್ ಎಂಬವರು ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳು ಸಿಗುತ್ತವೆ ಎಂದು ನಂಬಿ ಹಣ ಕಳೆದುಕೊಂಡವರು. ಹುಬ್ಬಳ್ಳಿ ಮೂಲದ ಸುರೇಶ್ ನಕಲಿ ಚಿನ್ನದ ನಾಣ್ಯ ಕೊಟ್ಟು ವಂಚನೆ ಮಾಡಿದ ಆರೋಪಿ. ಆರೋಪಿ ಸುರೇಶ್ ವಿರುದ್ಧ ಈಗಾಗಲೇ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರಟಿಗೆರೆ ತಾಲೂಕಿನ ಗೊರವನಹಳ್ಳಿಯ ಮಹಾಲಕ್ಷ್ಮಿ ದೇಗುಲದಲ್ಲಿ ರಂಗನಾಥ್ ಅವರಿಗೆ ಸುರೇಶ್ ಒಂದು ವರ್ಷದ ಹಿಂದೆ ಪರಿಚಯವಾಗಿದ್ದ. ಇಬ್ಬರು ಪರಿಚಯದ ನಂತರ ತಮ್ಮ ತಮ್ಮ ದೂರವಾಣಿ ಸಂಖ್ಯೆಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದರು.
ಸುಮಾರು ಒಂದು ವಾರದ ಹಿಂದೆ ರಂಗನಾಥ್ ಅವರಿಗೆ ಸುರೇಶ್ ಕರೆ ಮಾಡಿ, ನಮ್ಮ ಹಳೇ ಮನೆ ಕೆಡವಿ ಫೌಂಡೇಶನ್ ತೆಗೆಯುವಾಗ ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ನನಗೆ ಹಣದ ಅವಶ್ಯಕತೆ ಇದೆ. ಯಾರಿಗೂ ಹೇಳುವುದಿಲ್ಲವೆಂದರೆ ಅವುಗಳನ್ನು ನಿಮಗೆ ಕಡಿಮೆ ಬೆಲೆಗೆ ಕೊಡುವೆ. ನಿಮಗೆ ಬೇಕಿದ್ದರೆ ಸಂಪರ್ಕಿಸಿ ಎಂದು ಸುಳ್ಳು ಮಾಹಿತಿ ನೀಡಿದ್ದ ಎಂದು ದೂರಿನಲ್ಲಿ ರಂಗನಾಥ್ ಉಲ್ಲೇಖಿಸಿದ್ದಾರೆ.
ಇದನ್ನು ನಂಬಿದ ರಂಗನಾಥ್ಗೆ ಮೋಸ ಆಗಿದೆ. ನಂತರ ರಂಗನಾಥ್ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.