ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ನಲ್ಲಿ ಯುದ್ಧದ ವಾತಾವರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಭಾರತ ಸರ್ಕಾರ ಆತಂಕಕ್ಕೆ ಒಳಗಾಗಿದೆ. ಹಾಗಾಗಿ ಭಾರತೀಯ ರಾಯಭಾರಿ ಕಚೇರಿ ಅಲ್ಲಿ ತಂಗಿರುವ ಭಾರತೀಯರಿಗೆ ದೇಶ ಬಿಟ್ಟು ಹೋಗುವಂತೆ ಆದೇಶ ನೀಡಿದೆ.
ಆದಷ್ಟು ಬೇಗ ಉಕ್ರೇನ್ ತೊರೆಯುವಂತೆ ಸೂಚಿಸಿದ್ದು, ಈ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ನೀಡಿದೆ. ಭಾರತೀಯರು ದೇಶವನ್ನು ತೊರೆಯುವ ಮಾರ್ಗಗಳನ್ನು ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಈ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಈ ಆದೇಶಗಳ ಪ್ರಕಾರ, ಭಾರತೀಯರು ಉಕ್ರೇನ್ನಿಂದ ಹೊರಡಲು ಪಾಸ್ಪೋರ್ಟ್, ಉಕ್ರೇನ್ ನಿವಾಸಿ ಪರವಾನಗಿ, ವಿದ್ಯಾರ್ಥಿ ಕಾರ್ಡ್, ವಿದ್ಯಾರ್ಥಿ ಪ್ರಮಾಣಪತ್ರ, ಏರ್ ಟಿಕೆಟ್ನಂತಹ ದಾಖಲೆಗಳನ್ನು ಹೊಂದಿರಬೇಕು. ಮತ್ತು ಸುರಕ್ಷಿತವಾಗಿ ತಮ್ಮ ಸ್ಥಳದಿಂದ ಹೊರಬರಲು ಐದು ಮಾರ್ಗಗಳನ್ನು ತಿಳಿಸಿದ್ದಾರೆ.
ಅವುಗಳೆಂದರೆ ಉಕ್ರೇನ್-ಹಂಗೇರಿ ಗಡಿ, ಉಕ್ರೇನ್-ಸ್ಲೋವಾಕಿಯಾ ಗಡಿ, ಉಕ್ರೇನ್-ಮಾಲ್ಡೊವಾ ಗಡಿ, ಉಕ್ರೇನ್-ಪೋಲೆಂಡ್ ಗಡಿ, ಉಕ್ರೇನ್-ರೊಮೇನಿಯಾ ಗಡಿ. ಈ ಐದು ಮಾರ್ಗಗಳಲ್ಲಿ ಯಾವುದಾದರೂ ಒಂದು ಮಾರ್ಗದಿಂದ ಸುರಕ್ಷಿತ ಸ್ಥಳವನ್ನು ತಲುಪಬಹುದು. ಈ ಗಡಿಯಲ್ಲಿ ಸ್ಥಾಪಿಸಲಾದ ಚೆಕ್ ಪಾಯಿಂಟ್ಗಳಲ್ಲಿ ಸರಿಯಾದ ದಾಖಲೆಗಳನ್ನು ತೋರಿಸುವ ಮೂಲಕ ಭಾರತೀಯ ನಾಗರಿಕರು ನಿರ್ಗಮಿಸಬಹುದು.