ಹೊಸದಿಗಂತ ವರದಿ,ವಿಜಯಪುರ:
ಕಾಂಗ್ರೆಸ್ ಸರ್ಕಾರ 5 ವರ್ಷ ಪೂರ್ಣಗೊಳ್ಳುವುದಿಲ್ಲ, ಇದು ಪತನವಾಗಲಿದ್ದು, ಕೈನ 50 ಮಂದಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೊಸ ಬಾಂಬ್ ಸಿಡಿಸಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ ಡಿಸಿಎಂ ಆಕಾಂಕ್ಷಿ ಸಚಿವರು, ಸಚಿವ ಸ್ಥಾನ ವಂಚಿತ ಶಾಸಕರು, ಅಸಮಾಧಾನ ಶಾಸಕರು ಹೈಕಮಾಂಡ್ ಸಂಪರ್ಕದಲಿದ್ದು, ತಾವಾಗಿಯೇ ಬಂದು ಬಾಗಿಲು ಬಡಿಯುತ್ತಿದ್ದಾರೆ. ಆದರೆ ನಾವು ಸರ್ಕಾರ ಬೀಳಿಸಲ್ಲ, ತಾನಾಗಿಯೇ ಪತನವಾಗುತ್ತದೆ. ಸರ್ಕಾರ ಯಾವಾಗ ಪತನವಾಗುತ್ತದೆ ಎನ್ನುವುದು ಕಾದು ನೋಡಿ ಎಂದರು.
ಕಾಂಗ್ರೆಸ್ನಲ್ಲಿ ಎರಡಲ್ಲ, ನಾಲ್ಕು ಬಣ ಇವೆ. ಮೇಲ್ನೋಟಕ್ಕೆ ಎರಡು ಬಣ ಇವೆ. 4 ಡಿಸಿಎಂ ಕೇಳುತ್ತಿದ್ದಾರೆ, ಮುಖ್ಯಮಂತ್ರಿ ವಿಚಾರದಲ್ಲೂ ಗೊಂದಲ ಇದೆ. ರಾಜ್ಯ ಸರ್ಕಾರವೇ ಗೊಂದಲದಲ್ಲಿದೆ ಎಂದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇದೆಯಾ ಎನ್ನೋದೆ ಗೊತ್ತಾಗ್ತಿಲ್ಲ. ಗ್ಯಾರಂಟಿ ಮೋಸದಿಂದ ಅಧಿಕಾರಕ್ಕೆ ಬಂದಿದ್ದಾರೆ. ಫ್ರೀ ಕರೆಂಟ್ ನೀಡುತ್ತೀವಿ ಎಂದು ಕರೆಂಟ್ ಕಟ್ ಮಾಡುತ್ತಿದ್ದಾರೆ. ಮಹಿಳೆಯರಿಗೆ ಬಸ್ ಫ್ರೀ ಎಂದರು, ಬಸ್ ಕಡಿಮೆ ಮಾಡಿದ್ದಾರೆ ಎಂದರು.
ಸರ್ಕಾರ ಅಸ್ತವ್ಯಸ್ತವಾಗಿ ನಡೆಯುತ್ತಿದ್ದು, ರಾಜ್ಯದ 7 ಕೋಟಿ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಹಿಂದಿನ ಸರ್ಕಾರದ ಕಾಮಗಾರಿ ನಡೆಯುತ್ತಿಲ್ಲ. ಮಂಜೂರಾದ ಕಾಮಗಾರಿ ಪೂರ್ತಿ ಮಾಡಲಿ. ಹಣ ಕೊಟ್ಟರೆ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಿಚಾರ ಕುರಿತು ಪ್ರತಿಕ್ರಿಯಿಸಿ, ನನಗೆ ರಾಜ್ಯಾಧ್ಯಕ್ಷನಾಗುವ ಆಸೆ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ಅರ್ಹತೆಗೆ ಅನುಗುಣವಾಗಿ ಕೊಟ್ಟ ಕೆಲಸ ಮಾಡ್ತೇನೆ. ಟಿಕೆಟ್ ಕೊಡದೆ ಕಾರ್ಯಕರ್ತನಾಗಿ ಕೆಲಸ ಮಾಡು ಅಂದರೆ ಮಾಡುತ್ತೇನೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಗದ್ದಲ ವಿಚಾರ ಬಗ್ಗೆ, ಕಾಂಗ್ರೆಸ್ ಮಾತಾಡೋದು ಒಂದು, ಮಾಡೋದು ಇನ್ನೊಂದು ಎಂದು ದೂರಿದರು.