ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿ ನಗರದ ಹೊರವಲಯದ ಸಂಗನಕಲ್ಲು ಗ್ರಾಮದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಸಂರಕ್ಷಿತ, ಸುಮಾರು 5,000 ವರ್ಷಗಳಷ್ಟು ಹಳೆಯದಾದ ನವಶಿಲಾಯುಗದ ‘ಬೂದಿ ದಿಬ್ಬ’ ಬಹುತೇಕ ನಾಶಗೊಂಡಿದೆ.
ಬಳ್ಳಾರಿ ತಾಲ್ಲೂಕಿನ ಮೋಕಾ ಹೋಬಳಿಯ ಸಿರಿವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸರ್ವೆ ಸಂಖ್ಯೆ 160(ಬಿ)ರ ಭೂಮಿಯಲ್ಲಿ ಬೂದಿದಿಬ್ಬ ಇತ್ತು.
ಈ ಪಟ್ಟಾ ಭೂಮಿಯು ವೆಂಕಟೇಶ್ವರಲು ಮತ್ತು ವೆಂಕಟರಾಯುಡು ಎಂಬುವವರ ಜಂಟಿ ಒಡೆತನದಲ್ಲಿದೆ. ಜಮೀನಿನಲ್ಲಿದ್ದ ಗುಂಡಿಯನ್ನು ಮುಚ್ಚಿ ಜಮೀನು ಸಮತಟ್ಟು ಮಾಡಲು ದಿಬ್ಬವನ್ನು ನಾಶ ಮಾಡಲಾಗಿದೆ. ಈ ಸಂಬಂಧ ಇದೀಗ ಸ್ಥಳೀಯರು ಖಾಸಗಿ ಡೆವಲಪರ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಜಿಲ್ಲಾಡಳಿತದಿಂದ ಅನುಮತಿ ಪಡೆಯದೆ ದಿಬ್ಬವನ್ನು ಹಾಳು ಮಾಡಿರುವ ಖಾಸಗಿ ಡೆವಲಪರ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.