April 27, 2026
Monday, April 27, 2026
spot_img

ಬಿಪಿಎಲ್ ಕಾರ್ಡ್ ಪರಿಶೀಲನೆ ಅಗತ್ಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಬಿಪಿಎಲ್‌ ಕಾರ್ಡ್‌ಗಳನ್ನು ಅನರ್ಹರು ದುರುಪಯೋಗ ಪಡಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಸೂಕ್ತ ಪರಿಶೀಲನೆ ನಡೆಸಿ ಅನರ್ಹರ ಕಾರ್ಡ್‌ಗಳನ್ನು ರದ್ದುಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಆದರೆ ಪರಿಶೀಲನೆಯ ಸಮಯದಲ್ಲಿ ಅರ್ಹರು ಅನ್ಯಾಯಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಎಚ್ಚರಿಸಿದರು.

ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ರಾಜ್ಯದಲ್ಲಿ 8 ಲಕ್ಷ ಪಡಿತರ ಕಾರ್ಡ್‌ಗಳನ್ನು ರದ್ದುಪಡಿಸಿರುವ ಬಗ್ಗೆ ಕೇಳಿಬಂದಿದೆ. ಅನರ್ಹರ ಕಾರ್ಡ್‌ಗಳನ್ನು ತಂತ್ರಜ್ಞಾನವನ್ನು ಬಳಸಿಕೊಂಡು ತೆಗೆದುಹಾಕುವುದು ಅಗತ್ಯ. ಆದರೆ ಅರ್ಹ ಕುಟುಂಬಗಳಿಗೆ ತೊಂದರೆ ಆಗಬಾರದು. ಕೇಂದ್ರ ಸರ್ಕಾರ ಕ್ರೈಟೀರಿಯಾ ನಿಗದಿಪಡಿಸುವುದಿಲ್ಲ. ನಿಯಮ ರೂಪಿಸುವುದು ರಾಜ್ಯಗಳ ಅಧಿಕಾರ,” ಎಂದು ಹೇಳಿದರು.

ಐದು ವರ್ಷಕ್ಕೊಮ್ಮೆ ಬಿಪಿಎಲ್‌ ಕಾರ್ಡ್‌ಗಳ ಪರಿಶೀಲನೆ ನಡೆಸುವುದು ನಿಯಮವಾಗಿದ್ದು, ಅದನ್ನು ರಾಜ್ಯಗಳು ಅನುಸರಿಸಬೇಕು ಎಂದರು. ಐಟಿ ರಿಟರ್ನ್‌ ಸಲ್ಲಿಸಿದವರ ಕಾರ್ಡ್‌ಗಳನ್ನು ತೆಗೆಯಬೇಕೆಂದು ಕೇಂದ್ರ ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !