ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನ ಅಹಮದಾಬಾದ್ನಲ್ಲಿ ಜೂನ್ 12 ರಂದು ನಡೆದ ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನ ಪತನಕ್ಕೆ 241 ಪ್ರಯಾಣಿಕರು ಸೇರಿ 260 ಜನರು ಸಾವನ್ನಪ್ಪಿದ್ದರು.
ಇದೀಗ ಈ ವಿಮಾನದ ಪೈಲಟ್ ಆಗಿದ್ದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ತಂದೆ ಪುಷ್ಕರಾಜ್ ಸಭರ್ವಾಲ್ (91) ಕೇಂದ್ರ ಸರ್ಕಾರದಿಂದ ಪಾರದರ್ಶಕ ತನಿಖೆಗೆ ಒತ್ತಾಯಿಸಿದ್ದಾರೆ.
ಏರ್ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ (AAIB)ನ ಆರಂಭಿಕ ವರದಿಯು ಸುಮೀತ್ರ ಖ್ಯಾತಿಗೆ ಕಳಂಕ ತಂದಿದೆ ಎಂದು ಆರೋಪಿಸಿದ್ದಾರೆ.
ಆಗಸ್ಟ್ 29ರಂದು ವಿಮಾನಯಾನ ಕಾರ್ಯದರ್ಶಿ ಮತ್ತು AAIBಗೆ ಬರೆದ ಪತ್ರದಲ್ಲಿ, ಪುಷ್ಕರಾಜ್, ‘ತನಿಖೆಯ ಕೆಲವು ಮಾಹಿತಿಗಳು ಸೋರಿಕೆಯಾಗಿ, ಸುಮೀತ್ ಮಾನಸಿಕ ಒತ್ತಡದಿಂದ ಆತ್ಮಹತ್ಯೆಗೆ ಯೋಚಿಸಿದ್ದ ಎಂಬ ಗಾಳಿ ಸುದ್ದಿಗಳು ಹರಡಿವೆ. ಇದು ನನ್ನ ಆರೋಗ್ಯ ಮತ್ತು ಕುಟುಂಬದ ಮಾನಕ್ಕೆ ಧಕ್ಕೆ ತಂದಿದೆ’ ಎಂದಿದ್ದಾರೆ.
ಭಾರತದ ಸಂವಿಧಾನದ 21ನೇ ವಿಧಿಯಡಿಯ ಘನತೆಯ ಹಕ್ಕಿಗೆ ಭಂಗ ತಂದಿವೆ ಎಂದಿದ್ದಾರೆ. 2017ರ ಏರ್ಕ್ರಾಫ್ಟ್ ರೂಲ್ಸ್ ಕಲಂ 12ರಡಿ ಔಪಚಾರಿಕ ತನಿಖೆಗೆ ಆಗ್ರಹಿಸಿದ್ದಾರೆ.
ಸುಮೀತ್ಗೆ 15,638 ಗಂಟೆಗಳ ವಿಮಾನ ಚಾಲನೆಯ ಅನುಭವವಿದ್ದು, ಬೋಯಿಂಗ್ 787-8 ವಿಮಾನದಲ್ಲಿಯೇ 8,596 ಗಂಟೆಗಳ ಅನುಭವವಿದೆ. DGCAಯಿಂದ ಪೈಲಟ್ ತರಬೇತುದಾರರಾಗಿ ಪರವಾನಗಿ ಪಡೆದಿದ್ದರು. 25 ವರ್ಷಗಳ ಕಾಲ ಯಾವುದೇ ಅಪಘಾತಕ್ಕೆ ಕಾರಣರಾಗಿರಲಿಲ್ಲ. ಸುಮೀತ್ 15 ವರ್ಷಗಳ ಹಿಂದೆ ವಿಚ್ಛೇದಿತರಾಗಿದ್ದರು, ತಾಯಿಯ ಮರಣ 3 ವರ್ಷಗಳ ಹಿಂದೆ ಆಗಿತ್ತು. ಇದಾದ ಮೇಲೂ 100ಕ್ಕೂ ಹೆಚ್ಚು ವಿಮಾನಗಳನ್ನು ಸುರಕ್ಷಿತವಾಗಿ ಚಾಲನೆ ಮಾಡಿದ್ದರು ಎಂದು ಪುಷ್ಕರಾಜ್ ಸ್ಪಷ್ಟಪಡಿಸಿದ್ದಾರೆ.
AAIBನ ಜುಲೈ 12ರ ಆರಂಭಿಕ ವರದಿಯು ದುರಂತದ ಕಾರಣವನ್ನು ಸ್ಪಷ್ಟಪಡಿಸದೆ, ಸುಮೀತ್ರ ಮೇಲೆ ಆರೋಪ ಮಾಡಿದೆ ಎಂದು ಪುಷ್ಕರಾಜ್ ದೂರಿದ್ದಾರೆ.
ಕಾಕ್ಪಿಟ್ ಧ್ವನಿ ರೆಕಾರ್ಡರ್ನ ಮಾಹಿತಿಯನ್ನು ಸಾರ್ವಜನಿಕಗೊಳಿಸಿರುವುದು ತನಿಖೆಯ ವಿಶ್ವಾಸಾರ್ಹತೆಗೆ ಕುಂದು ತಂದಿದೆ ಎಂದಿದ್ದಾರೆ. ನಾವು ನ್ಯಾಯಯುತ ಮತ್ತು ಸಮಗ್ರ ತನಿಖೆಗೆ ಬದ್ಧರಾಗಿದ್ದೇವೆ. ತನಿಖಾ ತಂಡಕ್ಕೆ ಪೂರ್ಣ ಸ್ವಾತಂತ್ರ್ಯವಿದೆ ಎಂದು ತಿಳಿಸಿದೆ.