ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಕರಾವಳಿಯಲ್ಲಿ ಸರಕು ಹಡಗಿನ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ ವೆಳ್ಳರಿಕುಂಡು ಎಕೆಜಿ ನಗರದ ಅಖಿಲ್ ಜೋಯಲ್ ಅವರ ಮನೆಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಮಂಗಳವಾರ ಭೇಟಿ ನೀಡಿದ್ದು, ಮೃತದೇಹವನ್ನು ಆದಷ್ಟು ಬೇಗ ಊರಿಗೆ ತರಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದೇ ಸಂದರ್ಭ ಅಖಿಲ್ ಅವರ ಪೋಷಕರಾದ ವಾಲಿಪ್ಲಾಕಲ್ ಜೋಯ್ ಮತ್ತು ಸಾಲಿ ಹಾಗೂ ಇತರ ಸಂಬಂಧಿಕರಿಗೆ ಜಿಲ್ಲಾಧಿಕಾರಿಗಳು ಸಾಂತ್ವನ ಹೇಳಿದರು.
ಕೇಂದ್ರ ವಿದೇಶಾಂಗ ಸಚಿವಾಲಯವು ಅಖಿಲ್ ಸಾವನ್ನು ದೃಢೀಕರಿಸಿವ ಸಂದೇಶವನ್ನು ಕಳುಹಿಸಿದೆ ಮತ್ತು ರಾಜ್ಯ ಸರಕಾರ ಹಾಗೂ ನಾರ್ಕಾ ಸಾಧ್ಯವಾದಷ್ಟು ಬೇಗ ಮೃತದೇಹವನ್ನು ಊರಿಗೆ ತರಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅರ್ಜುನ್ ಪಾಂಡ್ಯನ್ ಅವರು ಹೆತ್ತವರಿಗೆ ತಿಳಿಸಿದರು.
ಇದನ್ನೂ ಓದಿ:
ಭಾರತೀಯ ರಾಯಭಾರ ಕಚೇರಿಗೆ ಸಂಬಂಧಿಸಿದಂತೆ ಲಭ್ಯವಿರುವ ಮಾಹಿತಿಯನ್ನು ಸಂಬಂಧಿಕರಿಗೆ ಸಾಧ್ಯವಾದಷ್ಟು ಬೇಗ ಒದಗಿಸಲಾಗುವುದು. ಅಖಿಲ್ ಜೋಯಲ್ ಅವರ ಮೃತದೇಹವನ್ನು ವಿಮಾನದ ಮೂಲಕ ದೇಶಕ್ಕೆ ಮತ್ತು ನಂತರ ಅವರ ಮನೆಗೆ ತರಲು ಸರಕಾರವು ಎಲ್ಲಾ ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಅಖಿಲ್ ಅವರ ಕುಟುಂಬಕ್ಕೆ ಸೂಕ್ತ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತವು ರಾಜ್ಯ ಸರಕಾರದೊಂದಿಗೆ ಸಂಪೂರ್ಣ ಸಹಕಾರವನ್ನು ಖಚಿತಪಡಿಸುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.



