ನಮ್ಮ ಮನೆಯಲ್ಲಿ ಹಿರಿಯರು ಹೇಳೋ ಒಂದು ಸಾಮಾನ್ಯ ಮಾತು ಎಂದರೆ ರಾತ್ರಿಯಲ್ಲಿ ಉಗುರು ಕತ್ತರಿಸಬಾರದು ಅಂತ. ಈ ನಂಬಿಕೆ ಇಂದಿಗೂ ಹಲವರ ಮನೆಗಳಲ್ಲಿ ಮುಂದುವರೆದಿದೆ. ಆದರೆ ಇದರ ಹಿಂದೆ ಕೇವಲ ಧಾರ್ಮಿಕ ಕಾರಣಗಳೇ ಅಲ್ಲ, ಆರೋಗ್ಯ ಮತ್ತು ಪರಿಸರ ಸಂಬಂಧಿತ ಕಾರಣಗಳೂ ಇವೆ.

ವಿಜ್ಞಾನ ಪ್ರಕಾರ ಉಗುರುಗಳನ್ನು ಸಮಯಕ್ಕೆ ಸರಿಯಾಗಿ ಕತ್ತರಿಸದಿದ್ದರೆ, ಮಲಿನತೆ ಸೇರಿ ಅನೇಕ ರೋಗಗಳಿಗೆ ಕಾರಣವಾಗಬಹುದು. ಆದರೆ ಸಂಜೆ ಅಥವಾ ರಾತ್ರಿ ವೇಳೆ ಉಗುರುಗಳನ್ನು ಕತ್ತರಿಸಬಾರದು ಎಂಬ ನಂಬಿಕೆಯ ಹಿಂದಿರುವ ಪ್ರಮುಖ ಕಾರಣ ಧಾರ್ಮಿಕ ನಂಬಿಕೆ. ಸಂಜೆಯ ವೇಳೆಯಲ್ಲಿ ಮನೆಗೆ ಲಕ್ಷ್ಮಿ ದೇವಿ ಆಗಮಿಸುತ್ತಾಳೆ ಎಂಬ ನಂಬಿಕೆಯಿದ್ದು, ಆ ಸಮಯದಲ್ಲಿ ಉಗುರು, ಕೂದಲು ಕತ್ತರಿಸುವುದು ಅಥವಾ ಕಸವನ್ನು ಮನೆಯಿಂದ ಹೊರಹಾಕುವುದು ದೇವಿಯನ್ನು ಅಗೌರವಗೊಳಿಸುವುದೆಂದು ಹೇಳಲಾಗುತ್ತದೆ.

ಇದೇ ವೇಳೆ, ಹಳೆಯ ಕಾಲದಲ್ಲಿ ವಿದ್ಯುತ್ ಸೌಲಭ್ಯ ಇರಲಿಲ್ಲ. ಕತ್ತಲಲ್ಲಿ ಬ್ಲೇಡ್ ಅಥವಾ ಕತ್ತರಿಗೆಯಿಂದ ಉಗುರು ಕತ್ತರಿಸುವಾಗ ಕೈ ಅಥವಾ ಕಾಲುಗಳಿಗೆ ಗಾಯವಾಗುವ ಅಪಾಯ ಇತ್ತು. ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿತ್ತು.

ಇನ್ನೊಂದು ಪ್ರಮುಖ ಕಾರಣವೆಂದರೆ, ಕತ್ತರಿಸಿದ ಉಗುರುಗಳು ನೆಲದಲ್ಲಿ ಬಿದ್ದರೆ ಪಕ್ಷಿಗಳಿಗೆ ಅದು ಅಕ್ಕಿಯ ಕಾಳಿನಂತೆ ಕಾಣಬಹುದು. ಅದನ್ನು ತಿಂದು ಗಂಟಲಲ್ಲಿ ಸಿಕ್ಕಿ ಉಸಿರಾಟದ ತೊಂದರೆಯಿಂದ ಅವು ಸಾಯುವ ಸಾಧ್ಯತೆ ಇದೆ. ಆದ್ದರಿಂದ ಕತ್ತರಿಸಿದ ಉಗುರನ್ನು ಪೇಪರ್ನಲ್ಲಿ ಸುತ್ತಿ ಸರಿಯಾಗಿ ಬಿಸಾಕುವುದು ಉತ್ತಮ.

ಅದೇ ರೀತಿ ರಾತ್ರಿಯಲ್ಲಿ ಉಗುರು ತುಂಡುಗಳು ಆಹಾರದಲ್ಲಿ ಬೆರೆತು ನಮ್ಮ ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು ಎಂಬ ನಂಬಿಕೆಯೂ ಇದೆ. ಹೀಗಾಗಿ ಉಗುರುಗಳನ್ನು ದಿನದ ವೇಳೆಯಲ್ಲೇ ಕತ್ತರಿಸುವುದು ಸೂಕ್ತ.