Tuesday, December 23, 2025

ಕಣ್ಣೂರು ಜೈಲಿನಿಂದ ಕೊಲೆ ಅಪರಾಧಿ ಎಸ್ಕೇಪ್: ಕೆಲವೇ ಹೊತ್ತಿನಲ್ಲಿ ಬಾವಿಯಲ್ಲಿ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2011ರ ಕೇರಳದ ಸೌಮ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ದೋಷಿ ಗೊವಿಂದಚಾಮಿ ಕಣ್ಣೂರು ಕೇಂದ್ರ ಜೈಲಿನಿಂದ ಶುಕ್ರವಾರ ಬೆಳಿಗ್ಗೆ ತಪ್ಪಿಸಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಗೋವಿಂದಚಾಮಿಗೆ ಎಡಗೈ ತುಂಡಾಗಿದ್ದು, ಕಣ್ಣೂರು ನಗರ ವ್ಯಾಪ್ತಿಯ ಥಲಾಪ್‌ನಲ್ಲಿರುವ ಪಾಳುಬಿದ್ದ ಕಟ್ಟಡದ ಸಮೀಪ ಆತನನ್ನು ಸೆರೆಹಿಡಿಯಲಾಗಿದೆ. ವರದಿಗಳ ಪ್ರಕಾರ ಆತ ಕಟ್ಟಡದ ಸಮೀಪ ಇದ್ದ ಬಾವಿಯಲ್ಲಿ ಅಡಗಿ ಕುಳಿತಿದ್ದನು.

ಬೆಳಗಿನ ಜಾವ 1.15 ರ ಸುಮಾರಿಗೆ 10 ನೇ ಬ್ಲಾಕ್‌ನಲ್ಲಿರುವ ಬಿಗಿ ಭದ್ರತೆಯ ಸೆಲ್‌ನಲ್ಲಿ ಏಕಾಂಗಿಯಾಗಿದ್ದ ಗೋವಿಂದಚಾಮಿ, ಕಬ್ಬಿಣದ ಸರಳುಗಳನ್ನು ಕತ್ತರಿಸಿ ವಾಶ್ ಏರಿಯಾದಿಂದ ಬಟ್ಟೆಗಳನ್ನು ಬಳಸಿ ಜೈಲಿನ ಗೋಡೆಯಿಂದ ಕೆಳಕ್ಕೆ ಇಳಿದಿದ್ದ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲು ಸಿಬ್ಬಂದಿ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಬೆಳಗಿನ ಜಾವದ ಸಮಯದಲ್ಲಿ ಮಾತ್ರ ಆತ ಅಲ್ಲಿ ಇಲ್ಲದ್ದನ್ನು ಗಮನಿಸಿದರು. ನಂತರ ಜೈಲಿನೊಳಗೆ ಹುಡುಕಾಟ ನಡೆಸಲಾಯಿತು ಆದರೆ ಅವನು ಪತ್ತೆಯಾಗಲಿಲ್ಲ. ಅಧಿಕಾರಿಗಳು ಅವರು ಹಲವು ಗಂಟೆಗಳ ಕಾಲ ಕಾಣೆಯಾಗಿದ್ದನ್ನು ದೃಢಪಡಿಸಿದರು.

ಜೈಲು ಅಧಿಕೃತವಾಗಿ ಬೆಳಿಗ್ಗೆ 7 ಗಂಟೆಗೆ ಪೊಲೀಸರಿಗೆ ಮಾಹಿತಿ ನೀಡಿತು ಮತ್ತು ಪೂರ್ಣ ಪ್ರಮಾಣದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಬಳಿಕ ಕಣ್ಣೂರು ಕೇಂದ್ರ ಕಾರಾಗೃಹದಿಂದ 4 ಕಿ.ಮೀ ದೂರದಲ್ಲಿರುವ ಪಾಳುಬಿದ್ದ ಮನೆಯ ಬಳಿಯ ಬಾವಿಯಲ್ಲಿ ಅಡಗಿ ಕುಳಿತಿದ್ದ. ಜೈಲಿನಿಂದ ಎಸ್ಕೇಪ್​ ವಿಚಾರ ತಿಳಿದ ಪೊಲೀಸರು ಡಾಗ್ ಸ್ಕ್ವಾಡ್, ಸುತ್ತ ಮುತ್ತಲಿನ ಸಿಸಿಟಿವಿ ದೃಶ್ಯ ಆಧರಿಸಿ ಕಾರ್ಯಾಚರಣೆ ನಡೆದಿದ್ದರು. ಇದಾದ ಬಳಿಕ ಬೆಳಗ್ಗೆ 10:30ರ ಸುಮಾರಿಗೆ ಬಾವಿಯಲ್ಲಿ ಅಡಗಿ ಕೂತಿದ್ದ ಗೋವಿಂದ ಚಾಮಿಯನ್ನು ಪತ್ತೆ ಹಚ್ಚಿದ ಪೊಲೀಸರು ಮತ್ತೆ ಲಾಕ್​ ಮಾಡಿದ್ದಾರೆ.

ಏನಿದು ಕೇಸ್​..?

2011ರ ಫೆಬ್ರವರಿ 1ರಂದು ಕೇರಳದಲ್ಲಿ ಸಂಚಲನ ಸೃಷ್ಟಿಸಿದ್ದ ಯುವತಿ ರೇಪ್ ಅಂಡ್​ ಮರ್ಡರ್ ಕೇಸ್​ನಲ್ಲಿ ಗೋವಿಂದಚಾಮಿ ಅರೆಸ್ಟ್​ ಆಗಿದ್ದ. ಎರ್ನಾಕುಲಂನಿಂದ ಶೋರ್ನೂರಿಗೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 23 ವರ್ಷದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಆರೋಪಿ ಗೋವಿಂದಚಾಮಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

error: Content is protected !!