ಹೊಸದಿಗಂತ ವರದಿ ವಿಜಯಪುರ:
ಜಿಲ್ಲೆಯ ನಿಡಗುಂದಿ ತಾಲೂಕಿನ ಆರೇಶಂಕರ್ ಗ್ರಾಮದಿಂದ ತುಂಬು ಗರ್ಭಿಣಿಯನ್ನು ಆಂಬ್ಯುಲೆನ್ಸ್ ನಲ್ಲಿ ಬಸವನಬಾಗೇವಾಡಿ ತಾಲೂಕಾಸ್ಪತ್ರೆಗೆ ಕರೆತರುತ್ತಿದ್ದಾಗ, ಮಾರ್ಗ ಮಧ್ಯ ಆಂಬ್ಯುಲೆನ್ಸ್ ನಲ್ಲಿಯೆ ಹೆರಿಗೆ ಆಗಿರುವ ಘಟನೆ ನಡೆದಿದೆ.
ಆರೇಶಂಕರ ಗ್ರಾಮದ ಪವಿತ್ರಾ ಮಂಜುನಾಥ ಹೊಕ್ರಾಣಿ ಎಂಬ ತುಂಬು ಗರ್ಭಿಣಿಯನ್ನು, ಆಂಬ್ಯುಲೆನ್ಸ್ ನಲ್ಲಿ ಕರೆತರುತ್ತಿದ್ದ ವೇಳೆ, ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಲ್ಲದೆ ಮಗು ಅಡ್ಡವಾಗಿ ತಿರುಗಿದ್ದು, ಇದನ್ನು ಗಮನಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ ಇಎಂಟಿ ವಿಜಯಕುಮಾರ ಲಿಂಗದಳ್ಳಿ, ತುಂಬಾ ಪ್ರಯತ್ನಪಟ್ಟು ತುರ್ತು ಸಂದರ್ಭ ಸರಳವಾಗಿ ಹೆರಿಗೆ ಮಾಡಿಸಿದ್ದಾರೆ.
ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದು, ಇಬ್ಬರನ್ನು ಬಸವನಬಾಗೇವಾಡಿ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ.
ಬಾಣಂತಿ ಕುಟುಂಬ ಆಂಬ್ಯುಲೆನ್ಸ್ ಸಿಬ್ಬಂದಿ ಇಎಂಟಿ ವಿಜಯಕುಮಾರ ಲಿಂಗದಳ್ಳಿ ಹಾಗೂ ಪೈಲಟ್ ವಿಜಯ ಗದ್ದನಕೇರಿ ಅವರನ್ನು ಅಭಿನಂದಿಸಿದ್ದಾರೆ.