ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ಹೈದರಾಬಾದ್ನಲ್ಲಿ ಎರಡು ಅವಳಿ ಕಂದಮ್ಮಗಳ ಕೊಂದು ತಾಯಿಯೊಬ್ಬಳು ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ನಡೆದಿದೆ.
27 ವರ್ಷದ ಮಹಿಳೆಯೊಬ್ಬಳು ತನ್ನ 2 ವರ್ಷ ಪ್ರಾಯದ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಬಳಿಕ ತಾನು ಸಾವಿಗೆ ಶರಣಾಗಿದ್ದಾಳೆ ತೆಲಗಾಣದ ಬಾಲನಗರದಲ್ಲಿ ನಡೆದಿದೆ. ತಲೆದಿಂಬನ್ನು ಬಳಸಿ ಮಕ್ಕಳಿಬ್ಬರ ಉಸಿರು ನಿಲ್ಲಿಸಿದ ತಾಯಿ ಬಳಿಕ ತಾನು ವಾಸವಿದ್ದ ಮನೆಯ 4ನೇ ಮಹಡಿಯಿಂದ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದಾಳೆ. ಘಟನೆ ನಡೆಯುವ ವೇಳೆ ಆಕೆಯ ಪತಿ ಕೆಲಸದ ಮೇಲೆ ಹೊರಗಡೆ ಹೋಗಿದ್ದರು ಎಂದು ವರದಿಯಾಗಿದೆ.
ತಾಯಿ 27 ವರ್ಷದ ಚಲ್ಲರಿ ಸಾಯಿ ಲಕ್ಷ್ಮಿ ತನ್ನ ಅವಳಿ ಮಕ್ಕಳಾದ ಚೇತನ್ ಕಾರ್ತಕೇಯಾ ಹಾಗೂ ಲಾಸ್ಯತಾ ವಲ್ಲಿ ಎಂಬುವವರನ್ನು ಉಸಿರುಕಟ್ಟಿಸಿ ಸಾಯಿಸಿದ್ದಾರೆ.
ಕುಟುಂಬದೊಳಗಿನ ಹೊಡೆದಾಟ ಹಾಗೂ ಒತ್ತಡದಿಂದಾಗಿ ಸಾಯಿಲಕ್ಷ್ಮಿ ಈ ಕೆಟ್ಟ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಾಯಿಲಕ್ಷ್ಮಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪತಿ ಅನಿಲ್ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆತನನ್ನು ಕಸ್ಟಡಿಗೆ ಪಡೆದಿದ್ದಾರೆ.