ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದ ಸಂಧರ್ಭದಲ್ಲಿ ಹಾಸನಾಂಬೆ ದೇವಸ್ಥಾನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರ ಹರಿವು ಹೆಚ್ಚಾಗಿ, ಭಕ್ತರ ನಿಯಂತ್ರಣದಲ್ಲಿ ಸಮಸ್ಯೆ ಉಂಟಾಗಿದೆ. ವಾರಾಂತ್ಯ ಹಾಗೂ ಹಬ್ಬದ ರಜೆ ಕಾರಣದಿಂದ ದೇವಸ್ಥಾನ ಸುತ್ತಮುತ್ತಲೂ ಭಕ್ತರು ಜಮಾಯಿಸಿದ್ದು, ಬಸ್ ಸಂಚಾರ ಮತ್ತು ಟಿಕೆಟ್ ವ್ಯವಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಭಕ್ತರನ್ನು ನಿಯಂತ್ರಸಲು ಅಸಾಧ್ಯದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಕೆಎಸ್ಆರ್ಟಿಸಿ ಬಸ್ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈ ಮಧ್ಯೆ, ಹಾಸನಾಂಬೆ ದರ್ಶನಕ್ಕೆ 50 ಸಾವಿರಕ್ಕೂ ಹೆಚ್ಚು ಮುಂಗಡ ಟಿಕೆಟ್ ಬುಕಿಂಗ್ ಮಾಡಲಾಗಿದ್ದು, ಭಕ್ತರ ಹೆಚ್ಚಳದಿಂದ ತೊಂದರೆ ತಪ್ಪಿಸಲು ಟಿಕೆಟ್ ಬುಕಿಂಗ್ ಕೂಡ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
ದರುಶನಕ್ಕೆ ಉಂಟಾಗಿರುವ ಸಾಲು ಕಿಲೋಮೀಟರ್ ಉದ್ದಕ್ಕೆ ವ್ಯಾಪಿಸಿದೆ. 1,000 ರೂ. ಮತ್ತು 300 ರೂ. ಟಿಕೆಟ್ ಪಡೆದ ಭಕ್ತರು ಪ್ರತ್ಯೇಕ ಸಾಲುಗಳಲ್ಲಿ ದರುಶನ ಪಡೆಯುತ್ತಿದ್ದಾರೆ. ಆದರೆ ಈ ಎಲ್ಲಾ ಕ್ರಮಗಳ ನಡುವೆಯೂ, ಭಕ್ತರ ಸಂಖ್ಯೆ ನಿರ್ವಹಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.