ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ಪಾಕಿಸ್ತಾನ ವಾಯುದಾಳಿ ನಡೆಸಿ ಮೂವರು ಯುವ ಅಫ್ಘಾನ್ ಕ್ರಿಕೆಟಿಗರ ಪ್ರಾಣ ಕಳೆದುಕೊಂಡು, ಅನೇಕರು ಗಾಯಗೊಂಡಿದ್ದಾರೆ. ಪಾಕಿಸ್ತಾನದ ಈ ಹೇಡಿತನದ ಕೃತ್ಯವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರವಾಗಿ ಖಂಡಿಸಿದೆ.
ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ಪಕ್ತಿಕಾ ಪ್ರಾಂತ್ಯದಲ್ಲಿ ಗಡಿಯಾಚೆಯಿಂದ ನಡೆದ ಹೇಡಿತನದ ವಾಯುದಾಳಿಯಲ್ಲಿ ಪ್ರಾಣ ಕಳೆದುಕೊಂಡ ಮೂವರು ಯುವ ಅಫ್ಘಾನ್ ಕ್ರಿಕೆಟಿಗರಾದ ಕಬೀರ್ ಅಘಾ, ಸಿಬ್ಘತುಲ್ಲಾ ಮತ್ತು ಹರೂನ್ ಅವರ ದುರಂತ ಸಾವಿಗೆ ಬಿಸಿಸಿಐ ತನ್ನ ತೀವ್ರ ದುಃಖ ಮತ್ತು ಸಂತಾಪವನ್ನು ವ್ಯಕ್ತಪಡಿಸುತ್ತದೆ” ಎಂದು ಬಿಸಿಸಿಐ ಹೇಳಿದೆ.
ಈ ಘಟನೆಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕೂಡ ಪಾಕಿಸ್ತಾನದ ದಾಳಿಯನ್ನು ಖಂಡಿಸಿ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗೆ ಬೆಂಬಲ ವ್ಯಕ್ತಪಡಿಸಿದೆ. ಪಾಕ್ ದಾಳಿಯ ಬಳಿಕ ಅಫ್ಘಾನಿಸ್ತಾನ ಮುಂದಿನ ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಲು ನಿರಾಕರಿಸಿದೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ತನ್ನ ಹೇಳಿಕೆಯಲ್ಲಿ, “ಪಕ್ತಿಕಾ ಪ್ರಾಂತ್ಯದ ಉರ್ಗುನ್ ಜಿಲ್ಲೆಯ ಕ್ರಿಕೆಟಿಗರ ನಿಧನ ದೇಶದ ಕ್ರೀಡಾ ಲೋಕಕ್ಕೆ ದೊಡ್ಡ ನಷ್ಟ. ಈ ದಾಳಿಯಲ್ಲಿ ಮೂವರು ಕ್ರಿಕೆಟಿಗರ ಜೊತೆಗೆ ಇತರ ಐವರು ನಾಗರಿಕರೂ ಸಾವನ್ನಪ್ಪಿದ್ದಾರೆ,” ಎಂದು ತಿಳಿಸಿದೆ.