ಹೊಸ ದಿಗಂತ ವರದಿ, ಚಿತ್ರದುರ್ಗ:
ಕಳೆದ ಸಲ ಕಾಂಗ್ರೆಸ್ ಸರ್ಕಾರ ಬೀಳುವುದು ಬೆಳಗಾವಿಯಿಂದಲೇ ಶುರುವಾಗಿತ್ತು. ಈಗ ಮತ್ತೆ ಬೆಳಗಾವಿಯಿಂದಲೇ ಕಾಂಗ್ರೆಸ್ ಸರ್ಕಾರ ಪತನ ಆರಂಭವಾಗಿದ್ದು, ಇದಕ್ಕೆ ಯತೀಂದ್ರ ಗುದ್ದಲಿ ಪೂಜೆ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಲೇವಡಿ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ – ಡಿಸೆಂಬರ್ನಲ್ಲಿ ಕ್ರಾಂತಿ ಎಂದು ನಾನು ಹೇಳಿದ್ದೆ. ಕ್ರಾಂತಿ ಇಲ್ಲ ಕೇವಲ ಭ್ರಾಂತಿ ಎಂದು ಕಾಂಗ್ರೆಸ್ನವರು ಹೇಳಿದ್ದರು. ನನ್ನ ಹೇಳಿಕೆ ಸುಳ್ಳು ಎಂದಿದ್ದರು. ಈಗ ನಿಜವಾಗುತ್ತಿದೆ. ಹಾಗಾದರೆ ಈಗ ಬೆಳಗಾವಿಗೆ ಹೋಗಿ ಯತೀಂದ್ರರವರು ಹೇಳಿಕೆ ನೀಡುವ ಅಗತ್ಯ ಏನಿತ್ತು? ಕಿರಿಕ್ ಶುರುವಾಗುವುದು ಅಲ್ಲಿಂದಲೇ ಎಂದರು.
ಮುಖ್ಯಮoತ್ರಿ ಸ್ಥಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟವಲ್ ಹಾಕಿಬಿಟ್ಟಿದ್ದರು. ಆದರೆ ಡಿ.ಕೆ.ಶಿವಕುಮಾರ್ಗೆ ಸಿಎಂ ಸ್ಥಾನ ತಪ್ಪಿಸಲು ಕುತಂತ್ರ ನಡೆದಿದೆ. ಅಭಿವೃದ್ಧಿ ವಿಚಾರ ಮರೆಮಾಚಲು ಯತೀಂದ್ರ ಹುಳ ಬಿಟ್ಟಿದ್ದಾರೆ. ಕಾಂಗ್ರೆಸ್ ಆಂತರಿಕ ವಿಚಾರದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ. ಸರ್ಕಾರ ಬಿದ್ದರೆ ಹೊಸ ಚುನಾವಣೆಗೆ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆಯವರ ಬಗ್ಗೆ ನಾನು ಪ್ರತಿಕ್ರಿಯಿಸಲು ಹೋಗಲ್ಲ. ದಲಿತ ಸಂಘಟನೆ ಭೀಮ್ ಆರ್ಮಿಗೆ ಪಥಸಂಚಲನ ಅಧಿಕಾರವಿದೆ. ಅವರಿಗೆ ಪಥಸಂಚಲನ ಮಾಡಬೇಡಿ ಎಂದು ಯಾರು ಹೇಳಿದ್ದಾರೆ? ಪ್ರಿಯಾಂಕ ಖರ್ಗೆಯವರು ಐಟಿ, ಬಿಟಿ ಇಲಾಖೆಯಲ್ಲಿ ಅಭಿವೃದ್ಧಿ ಮಾಡಿಲ್ಲ. ಐಟಿ, ಬಿಟಿಯವರು ರಾಜ್ಯ ಬಿಟ್ಟು ಓಡಿ ಹೋಗುತ್ತಿದ್ದಾರೆ. ೧.೩೦ ಲಕ್ಷ ಕೋಟಿ ರೂ. ೩೦ ಸಾವಿರ ಉದ್ಯೋಗ ರಾಜ್ಯ ಬಿಟ್ಟು ಹೋಯಿತು ಎಂದರು.
ಐಟಿ, ಬಿಟಿ, ಇನ್ಫೋಸಿಸ್ ಅವರು ಸಹ ಸರ್ಕಾರಕ್ಕೆ ಬೈಯುತ್ತಿದ್ದಾರೆ. ಈ ರೀತಿ ಚರ್ಚೆಯಿಂದ ಅಭಿವೃದ್ಧಿ ವಿಚಾರ ವಿಷಯಾಂತರ ನಡೆಯುತ್ತಿದೆ. ಮಾಧ್ಯಮದಲ್ಲಿ ಕಿತಾಪತಿ ಸುದ್ಧಿ ಬರಬೇಕೆಂಬುದು ಮುಖ್ಯಮಂತ್ರಿಗಳ ತಂತ್ರಗಾರಿಕೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಗಂಗಾನದಿಯಲ್ಲಿ ಮುಳುಗಿಸಿದಂತಾಯಿತು. ಡಿಕೆಶಿ ಯಾವತ್ತೂ ಸಿಎಂ ಆಗಬಾರದು. ಆ ರೀತಿ ತಂತ್ರಗಾರಿಕೆ ಮಾಡಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರವರ ಗುಂಪಿನಿAದ ತಂತ್ರಗಾರಿಕೆ ನಡೆದಿದೆ. ಮುಖ್ಯಮಂತ್ರಿ ಕುರ್ಚಿ ಮೇಲೆ ಟವಲ್ ಹಾಕಿದ್ದ ಡಿ.ಕೆ.ಶಿವಕುಮಾರ್ಗೆ ನಿರಾಸೆಯಾಗಿದೆ. ಈ ರಾಜ್ಯ ಕಾಂಗ್ರೆಸ್ ಸರ್ಕಾರ ಬಹಳ ದಿನ ಇರಲ್ಲ. ಕಾಂಗ್ರೆಸ್ ಸರ್ಕಾರ ನೆಗೆದು ಬಿದ್ದು ಹೋಗುತ್ತದೆ ಎಂದು ವ್ಯಂಗ್ಯವಾಡಿದರು.
ಚಿತ್ತಾಪುರ ವಿಚಾರಕ್ಕೆ ಪ್ರತಿಕ್ರಿಯಿಸಿ, ಆರ್ಎಸ್ಎಸ್ನವರು ಸಮರ್ಥರಿದ್ದು ಉತ್ತರಿಸುತ್ತಾರೆ. ಆರ್ಎಸ್ಎಸ್ಗೂ ನಮಗೂ ರಾಜಕೀಯ ಸಂಬoಧ ಇಲ್ಲ. ಆರ್ಎಸ್ಎಸ್ ರಾಷ್ಟ್ರೀಯತೆ ಯ ಸಂಸ್ಥೆ. ದೇಶಕ್ಕಾಗಿ ತನು ಮನ ಧನ ತ್ಯಾಗ ಮಾಡುವ ಸಂಸ್ಥೆ. ಆರ್ಎಸ್ಎಸ್ಗೂ ಬಿಜೆಪಿಗೂ ಹೋಲಿಕೆ ಸಲ್ಲದು. ಬಿಜೆಪಿ ರಾಜಕೀಯ ಪಕ್ಷ. ಆರ್ಎಸ್ಎಸ್ ಸಾಮಾಜಿಕ ಸಂಸ್ಥೆ. ಆರ್ಎಸ್ಎಸ್ನಲ್ಲಿ ಜಾತೀಯತೆ ಇಲ್ಲ. ಮೇಲೂ ಕೀಳು ಎಂಬುದಿಲ್ಲ. ಆರ್ಎಸ್ಎಸ್ನಲ್ಲಿ ಜಾತಿಯ ಕಾಲಂ ಇಲ್ಲ. ದೇಶದಲ್ಲಿನ ಎಲ್ಲಾ ಸಮುದಾಯದವರು ಆರ್ಎಸ್ಎಸ್ನಲ್ಲಿದ್ದಾರೆ ಎಂದರು.

