ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸದಿಲ್ಲಿ: ಭಾರತ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ 1930ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ನೇತೃತ್ವದಲ್ಲಿ ಸಾವಿರಾರು ಸತ್ಯಾಗ್ರಹಿಗಳು ಆಂದೋಲನದ ನಡೆಸಿದ್ದ ಪುಸಾಡ್ನಲ್ಲಿ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರಕಾರ ಮುಂದಾಗಿದೆ.
ಸಂಸದ ರಾಕೇಶ್ ಸಿನ್ಹಾ ಅವರು ರಾಜ್ಯಸಭೆಯಲ್ಲಿ ಈ ಕುರಿತು ವಿಶೇಷ ಪ್ರಸ್ತಾಪ ಎತ್ತಿ, ಮಹಾರಾಷ್ಟ್ರದ ಪುಸಾಡ್ ಯವತ್ಮಾಲ್ನಲ್ಲಿರುವ ಸತ್ಯಾಗ್ರಹ ಸ್ಥಳದಲ್ಲಿ ವಸ್ತುಸಂಗ್ರಹಾಲಯವನ್ನು ನಿರ್ಮಿಸಲು ಒತ್ತಾಯಿಸಿದ್ದರು.
ಇದೀಗ ಕೇಂದ್ರ ಸಂಸ್ಕೃತಿ ಸಚಿವಾಲಯವು ಈ ಕುರಿತು ಆದೇಶ ಹೊರಡಿಸಿದ್ದು, ಪುಸಾಡ್ನಲ್ಲಿ ಸ್ವಾತಂತ್ರ್ಯ ಸ್ಮರಣಾರ್ಥ ವಸ್ತುಸಂಗ್ರಹಾಲಯದ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಿ, ಸಲ್ಲಿಸುವಂತೆ ಆದೇಶಿಸಿದೆ.
ಪುಸಾಡ್ನ ಸತ್ಯಾಗ್ರಹ ಸ್ಥಳದಲ್ಲಿ ವಸ್ತುಸಂಗ್ರಹಾಲಯ ಸ್ಥಾಪನೆಗೆ ಕೆಲಸವನ್ನು ಪ್ರಾರಂಭಿಸಲು, ಎಲ್ಲಾ ಅಗತ್ಯಗಳನ್ನು ವಿವರಿಸುವ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಒದಗಿಸುವಂತೆ ಸೂಚಿಸಲಾಗಿದೆ. ಡಿಪಿಆರ್ ಸಲ್ಲಿಕೆಯ ನಂತರ ಮುಂದಿನ ಅಗತ್ಯ ಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.