ದಿಗಂತ ವರದಿ ಹುಬ್ಬಳ್ಳಿ:
ಹಿಂದಿನ ಎಲ್ಲಾ ಭಿನ್ನ ಮತಗಳನ್ನು ಮರೆತು ದೇಶದ ಪ್ರಗತಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ ಎಂದು ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ ಹೇಳಿದರು.
73ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಮಿನಿವಿಧಾನ ಸೌಧದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಕಾನೂನು ಬದ್ಧವಾಗಿ ತೊಡೆದು ಹಾಕಲು ಗಣರಾಜ್ಯವನ್ನು ಸ್ಥಾಪಿಸಲಾಗಿದೆ.
ವಿವಿಧತೆಯಲ್ಲಿ ಏಕತೆ ತತ್ವದ ಆಧಾರ ಮೇಲೆ ದೇಶವು ಒಗ್ಗೂಡಿದೆ. ಈ ಕುರಿತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚನಾ ಸಭೆಯಲ್ಲಿ ಆಡಿದ ಮಾತುಗಳು ಮುಖ್ಯವಾಗಿವೆ. ಅನೇಕ ಸಮಸ್ಯೆಗಳು ಹಾಗೂ ವೈರುದ್ಯಗಳಿಂದ ದೇಶ ಒಗ್ಗೂಡಿದೆ. ಭಾರತ ಒಗ್ಗೂಡುವುದನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದರು.
ಸರ್ಕಾರ ಕೋವಿಡ್ ಸಮಯದಲ್ಲಿ ಸಾರ್ವಜನಿಕರಿಗೆ ಆಸರೆಯಾಗಿದೆ. ಕೋವಿಡ್ ವೈರಸ್ ತೊಡೆದು ಹಾಕಲು ಎಲ್ಲರೂ ಪ್ರಯತ್ನಸಿಬೇಕು. ಕಡ್ಡಾಯ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಮಾಡಬೇಕು. ಕೋವಿಡ್ ಸಮಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ, ಪೊಲೀಸ್,ಪಾಲಿಕೆ, ಗ್ರಾಮ ಪಂಚಾಯತಿ, ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಸರ್ಕಾರಿ ನೌಕರರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದರು.
ಹುಬ್ಬಳ್ಳಿ ನಗರ ತಹಶೀಲ್ದಾರ ಶಶಿಧರ ಮಾಡ್ಯಾಳ, ತಾ.ಪಂ.ಇಒ ಗಂಗಾಧರ ಕಂದಕೂರ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.