ಹೊಸದಿಗಂತ ವರದಿ, ಮಂಗಳೂರು:
ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಟಿಪ್ಪು ಜಯಂತಿ ಮಾಡುವ ಮೂಲಕ ಸಾಮರಸ್ಯವನ್ನು ಕೆಡಿಸುವ ಕೆಲಸ ಮಾಡಿದರು. ಶಾದಿ ಭಾಗ್ಯದ ಹೆಸರಿನಲ್ಲಿ ಕೆಲವೇ ಸಮುದಾಯಕ್ಕೆ ಅವಕಾಶ ಮಾಡಿಕೊಟ್ಟ ಸಿದ್ರಾಮಣ್ಣ ಅವರು ಹಿಜಾಬ್ ಕುರಿತು ಮಾತನಾಡುತ್ತಾರೆ. ಅವರ ಅಧಿಕಾರದ ಕಾಲದಲ್ಲಿ ಇಂತಹ ಘಟನೆಗಳು ಎಷ್ಟಾಗಿದೆ? ಎಷ್ಟು ಸಾಮರಸ್ಯ ಕೆಡಿಸಲಾಗಿದೆ ಎನ್ನುವುದನ್ನು ಅರ್ಥಮಾಡಿಕೊಂಡು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಅವರು ದ.ಕ.ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರ ನೂತನ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಾಲೆ ಎನ್ನುವುದು ಸರಸ್ವತಿ ಮಂದಿರ. ಶಾಲೆಯ ನಿಯಮ ಹಾಗೂ ಅನುಶಾಸನದ ಜತೆಗೆ ಕಲಿಯಬೇಕಾದದ್ದು ಧರ್ಮ. ಅದರ ಜತೆಗೆ ಬೇರೆ ಧರ್ಮ ಬರುವುದು ಸರಿಯಲ್ಲ. ಶಾಲೆಯ ನಿಯಮದಡಿಯಲ್ಲಿಯೇ ಎಲ್ಲರೂ ಕಲಿಯಬೇಕು. ಇಲ್ಲಿ ತಾಲಿಬಾನ್ ಮಾಡಲು ಅವಕಾಶ ನೀಡುವುದಿಲ್ಲ. ಮಕ್ಕಳಿಗೆ ಅವಶ್ಯಕತೆ ಇರೋದು ಶಿಕ್ಷಣ ಯಾರಿಗೆ ಈ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯ ಇಲ್ಲವೋ ಅವರು ಬೇರೆ ದಾರಿ ಹುಡುಕಬಹುದು. ಆದರೆ ಸರಕಾರ ಮಾತ್ರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತದೆ. ಹಿಜಾಬ್ಗೆ ಸರಕಾರ ಅವಕಾಶ ಕೊಡುವುದಿಲ್ಲ. ನ್ಯಾಯಾಲಯದಲ್ಲಿರುವುದರಿಂದ ಈ ಕುರಿತು ಹೆಚ್ಚು ಮಾತನಾಡುವುದಿಲ್ಲ ಎಂದರು.
ಮಂತ್ರಿ ಮಂಡಲ ಪುನರ್ ರಚನೆ ಸದ್ಯ ಇಲ್ಲ: ಮಂತ್ರಿ ಮಂಡಲದ ಪುನರ್ ರಚನೆ ವಿಚಾರದಲ್ಲಿ ಪ್ರತಿಕ್ರಿಯಿಸುತ್ತಾ ಇದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಸಂದರ್ಭ ಬಂದಾಗ ರಾಷ್ಟ್ರೀಯ ನಾಯಕರ ಜತೆ ಮಾತನಾಡಿ ಮಂತ್ರಿ ಮಂಡಲದ ರಚನೆಯನ್ನು ಮಾಡುತ್ತಾರೆ. ಇದಕ್ಕೆ ಬೇರೆ ಯಾರೋ ಮಾತನಾಡುವ ಅವಶ್ಯಕತೆ ಇಲ್ಲ. ಸಮಯ ಬಂದಾಗ ನಡೆಯುತ್ತದೆ. ಮಂತ್ರಿ ಮಂಡಲದಲ್ಲಿ ನಾನು ಇರಬೇಕು ಎಂದು ಅಪೇಕ್ಷೆ ಪಡುವುದು ತಪ್ಪಲ್ಲ. ಶಾಸಕರಾದವರು ಮಂತ್ರಿಗಳಾಗುತ್ತಾರೆ ಆದರೆ ಎಲ್ಲ ಶಾಸಕರಿಗೂ ಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ. ಹಿರಿಯರನ್ನು ಗಮನದಲ್ಲಿಟ್ಟುಕೊಂಡು ನಮ್ಮ ರಾಷ್ಟ್ರೀಯ ಹಿರಿಯರು ಹಾಗೂ ನಾವು ಕೂತು ಚರ್ಚೆ ಮಾಡಿ ಯಾರಿಗೆ ಅವಕಾಶ ನೀಡಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತೇವೆ ಎಂದರು.