ದಿಗಂತ ವರದಿ ಶಿವಮೊಗ್ಗ :
ಕೊಲೆ ಆರೋಪಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಕಾರಾವಾಸ ಶಿಕ್ಷೆ ಮತ್ತು 2,50,000 ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.
ಕಲ್ಲಹಳ್ಳಿ ಹುಡ್ಕೋ ಕಾಲೋನಿ ನಿವಾಸಿ ಶ್ರೀಧರ್ (36) ಶಿಕ್ಷೆಗೆ ಒಳಗಾಗಿರುವ ಆರೋಪಿಯಾಗಿದ್ದು, ಈತ ಶಿಮೊಗ್ಗದ ಗ್ಯಾರೇಜ್ ರೋಡ್ ನಿವಾಸಿ ಮಂಜಪ್ಪ ಜಿ. (43) ಇವರನ್ನು 16.02.2014 ರಂದು ಎಪಿಎಂಸಿ ಬಳಿ ಆರೋಪಿ ಕರೆಸಿಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿ ಚೀಲದಲ್ಲಿ ಕಟ್ಟಿ ಶವ ಹೂತು ಹಾಕಿದ್ದ.
ಘಟನೆಯ ಹಿನ್ನೆಲೆ : ಶ್ರೀಧರ್ ಹಾಗೂ ಮಂಜಪ್ಪ ಇಬ್ಬರೂ ಸ್ನೇಹಿತರಾಗಿದ್ದು, ಮಂಜಪ್ಪನಿಂದ ಶ್ರೀಧರ್ 9 ಲಕ್ಷ ರೂ. ಹಣ ಸಾಲವಾಗಿ ಪಡೆದಿದ್ದು, ಸಾಲದ ಹಣ ಪದೇ ಪದೇ ಕೇಳಿದ್ದರಿಂದಾಗಿ ಸಂಚು ರೂಪಿಸಿ ಎಪಿಎಂಸಿ ಬಳಿ ಕರೆಸಿಕೊಂಡು ಕೊಲೆ ಮಾಡಲಾಗಿತ್ತು.
ಈ ಸಂಬಂಧ ಕೋಟೆ ಸಿಪಿಐ ಜಯರಾಜ್ ಹಾಗೂ ದೊಡ್ಡಪೇಟೆ ಸಿಪಿಐ ಎಸ್. ಎಮ್. ಶಿವಕುಮಾರ್ ನೇತೃತ್ವದ ತಂಡ 20-02-2014 ರಂದು ಆರೋಪಿಯನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಆರೋಪ ಸಾಬೀತಾಗಿದ್ದರಿಂದ ಶಿಕ್ಷೆ ನೀಡಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ವಿಶೇಷ ಅಭಿಯೋಜಕ ಜಿ.ಮಧು ವಾದಿಸಿದ್ದರು.