ಹೊಸದಿಗಂತ ವರದಿ,ನಾಗಮಂಗಲ:
ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ನೂರಾರು ಅಣೆಕಟ್ಟೆಗಳು ನಿರ್ಮಾಣಗೊಂಡಿವೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಯಾವುದಾದರೊಂದು ಅಣೆಕಟ್ಟೆ ಕಟ್ಟಿದ್ದರೆ ಸಾಬೀತುಪಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿ ಹಿಂಭಾಗದ ಆವರಣದಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಹಾಗೂ ಮೇಕೆದಾಟು ಪಾದಯಾತ್ರೆ ಕುರಿತು ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯಿಂದ ಹಲವು ಜಿಲ್ಲೆಯ ಜನರಿಗೆ ಸಾಕಷ್ಟು ಅನುಕೂಲವಾಗಲಿದ್ದು ಈ ಯೋಜನೆ ಶತಾಯಗತಾಯ ಆಗಲೇಬೇಕಿದೆ ಎಂದರು.
ನಾವೆಲ್ಲ ರೈತರ ಮಕ್ಕಳಲ್ಲವೇ? : ಮೇಕೆದಾಟು ಪಾದಯಾತ್ರೆ ಕುರಿತು ಜೆಡಿಎಸ್ ನಾಯಕರ ವ್ಯಂಗ್ಯದ ವಿಚಾರಕ್ಕೆ ತಿರುಗೇಟು ನೀಡಿದ ಡಿಕೆಶಿ, ಮಾತೆತ್ತಿದರೆ ಜೆಡಿಎಸ್ನವರು ನಾವು ರೈತರ ಮಕ್ಕಳು ಅನ್ನುತ್ತಾರೆ. ಹಾಗಾದರೆ ನಾವು ನೀವ್ಯಾರು ರೈತರ ಮಕ್ಕಳಲ್ಲವೇ. ಜೆಡಿಎಸ್ನವರಿಗೆ ನಮ್ಮನ್ನು ಬಿಟ್ಟು ಬೇರ್ಯಾರು ಇರಬಾರದೆಂಬ ಧೋರಣೆಯ ಜೊತೆಗೆ, ನಮ್ಮ ಪಕ್ಷವನ್ನು ಹೊರತುಪಡಿಸಿ ಯಾವ ಪಕ್ಷಗಳೂ ಕೂಡ ಅಭಿವೃದ್ಧಿಯಾಗಬಾರದೆಂಬ ಉದ್ದೇಶವಿದೆ ಎಂದು ವಾಗ್ದಾಳಿ ನಡೆಸಿದರು.