ಹೊಸ ದಿಗಂತ ಡಿಜಿಟಲ್ ಡೆಸ್ಕ್
ಪ್ರಧಾನಿ ನರೇಂದ್ರ ಮೋದಿ ಅವರು ‘ಮಟುವಾ ಧರ್ಮ ಮಹಾಮೇಳ 2022’ನ್ನು ಉದ್ದೇಶಿಸಿ ಇಂದು ಮಧ್ಯಾಹ್ನ 4.30ಕ್ಕೆ ಭಾಷಣ ಮಾಡುವುದಾಗಿ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಶ್ರೀಧಾಮ ಠಾಕೂರ್ ನಗರದಲ್ಲಿ ನಡೆಯುವ ಈ ಸಮಾರಂಭವು ಶ್ರೀ ಹರಿಚಂದ ಠಾಕೂರ್ ಜೀ ಅವರ ಜಯಂತಿಯ ಆಚರಣೆಯೂ ಆಗಿದ್ದು ಇದರಲ್ಲಿ ಭಾಗವಹಿಸುವುದು ಗೌರವದ ಕಾರ್ಯ ಎಂಬುದಾಗಿ ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.
ತುಳಿತಕ್ಕೊಳಗಾದ ಸಮುದಾಯದ ಧರ್ಮಪ್ರಜ್ಞೆ
ಈ ಹಿಂದೆ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗಲೂ ಪ್ರಧಾನಿ ನರೇಂದ್ರ ಮೋದಿ ಮಟುವಾ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದರು. ಭಾರತದ ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಜಾತಿ ಅಡಿಯಲ್ಲಿ ಬರುವ ನಾಮಶೂದ್ರ ಸಮುದಾಯವು ಮಟುವಾ ಸಮುದಾಯಕ್ಕೆ ಸೇರಿದ್ದೇ ಆಗಿದೆ.
ಸ್ವಾತಂತ್ರ್ಯಪೂರ್ವದ ಅವಿಭಜಿತ ಭಾರತದಲ್ಲಿ ಹರಿಚಂದ್ ಠಾಕೂರ್ ಅವರು ತುಳಿತಕ್ಕೊಳಗಾದವರ ಸಾಮಾಜಿಕ ಉನ್ನತಿಗೆ ಅಭಿಯಾನವನ್ನೇ ನಡೆಸಿದ್ದರು. ಅದು ಕೇವಲ ಸಾಮಾಜಿಕವಾಗಿರದೇ ಧಾರ್ಮಿಕ ರೂಪದಲ್ಲೂ ಇತ್ತು. ಇವತ್ತಿನ ಬಾಂಗ್ಲಾದೇಶದ ಒರಕಂಡಿಯಲ್ಲಿ 1806ರಲ್ಲಿ ಮಟುವಾ ಮತವನ್ನು ಸ್ಥಾಪಿಸಲಾಯಿತು. ಸಮುದಾಯದವರೆಲ್ಲ ಹರಿಚಂದ್ ಠಾಕೂರ್ ಅವರ ಮಾರ್ಗದರ್ಶನದಲ್ಲಿ ಒಗ್ಗಟ್ಟು ಸಾಧಿಸಿದ್ದರು.