ಹೊಸದಿಗಂತ ವರದಿ ಬೆಳಗಾವಿ :
ರಾಜ್ಯ ಸರಕಾರದಲ್ಲಿ ಖುರ್ಚಿಗಾಗಿ ಯುದ್ಧ ಪ್ರಾರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಮಂಗಳವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು. ರಾಜ್ಯ ಸರಕಾರದಲ್ಲಿ ಖುರ್ಚಿಗಾಗಿ ಯುದ್ಧ ಪ್ರಾರಂಭವಾಗಿದೆ. ಎಲ್ಲರೂ ಬಿಹಾರ ವಿಧಾನಸಭೆಯ ಚುನಾವಣೆಯತ್ತ ಗಮನ ಹರಿಸಿದ್ದಾರೆ. ಅದಾದ ಬಳಿಕ ಬಹಿರಂಗವಾಗಿ ಎಲ್ಲರಿಗೂ ತಿಳಿಯುತ್ತದೆ ಎಂದರು.
ಕಬ್ಬಿನ ಬೆಂಬಲ ಬೆಲೆ ರೈತರು ಹೋರಾಟ ಮಾಡುತ್ತಿದ್ದಾರೆ. ರೈತರ ಹೋರಾಟದಲ್ಲಿ ಭಾಗಿಯಾಗುವುದಕ್ಕೆ
ಯಡಿಯೂರಪ್ಪ ಮಗನಾಗಿ ಬಂದಿದ್ದೇನೆ. ಯಾರ್ಯಾರ ಕಾರ್ಖಾನೆಗಳಿವೆ ಎಂದು ಎಲ್ಲರಿಗೂ ಗೊತ್ತಿದೆ. ಸಕ್ಕರೆ ಕಾರ್ಖಾನೆ ಮಾಲಿಕರ ಜೊತೆ ಸೇರಿ ಅಧಿಕಾರಿಗಳು ಚರ್ಚೆ ನಡೆಸಿ ರೈತ ಸಮಸ್ಯೆಗಳನ್ನು ಕೂಡಲೇ ಪರಿಹರಿಬೇಕೆಂದರು.
ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಸ್ ನಲ್ಲಿ ಒಂದು ವಾರದಿಂದ ಕಬ್ಬು ಬೆಳೆಗಾರರು ಅಹೋರಾತ್ರಿ ಹೋರಾಟ ಮಾಡುತ್ತಿದ್ದಾರೆ. ಅವರ ನ್ಯಾಯ ಯುತವಾಗಿರುವ ಬೇಡಿಕೆಗಳನ್ನು ರಾಜ್ಯ ಸರಕಾರ ಮುಂದಾಳತ್ವ ವಹಿಸಿ ಈಡೇರಿಸುವ ಆಗ್ರಹ ಇದೆ. ರಾಜ್ಯ ಸರಕಾರ ಸ್ಪಂದನೆ ಮಾಡದಿದ್ದಾಗ ವಿರೋಧ ಪಕ್ಷವಾಗಿ ಬೆಂಬಲ ನೀಡಬೇಕಿದೆ. ಹಾಗಾಗಿ ನಾನು ಸಹ ಎಲ್ಲಾ ಪಕ್ಷದ ಮುಖಂಡರ ಜೊತೆಗೆ ಚರ್ಚೆ ಮಾಡಿ ರೈತರ ಪ್ರತಿಭಟನೆಗೆ ಬೆಂಬಲ ಕೊಡಲು ಬಂದಿದ್ದೇನೆ ಎಂದರು.
ರಾಜ್ಯದ ಮುಖ್ಯಮಂತ್ರಿ ಕಳೆದ 2014ರಲ್ಲಿ ಅಧಿವೇಶನದ ಸಂದರ್ಭದಲ್ಲಿ. ರೈತ ವಿಠ್ಠಲ್ ಅರಬಾವಿಯವರು ಕಬ್ಬಿನ ದರದ ವಿಚಾರದಲ್ಲಿ ಪ್ರಾಣ ಕಳೆದುಕೊಂಡರು. ಆಗ ಯಡಿಯೂರಪ್ಪ ಅವರು ಹೋರಾಟ ಮಾಡಿ ಅಂದಿನ ಸಿಎಂಗೆ ಒತ್ತಾಯಿಸಿ ಯಶಸ್ವಿಯಾಗಿದ್ದರು.
ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಅತೀವೃಷ್ಟಿ ಸಂದರ್ಭದಲ್ಲಿ ಸಹ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾನು ಪ್ರವಾಸ ಮಾಡಿದೆ. ಭೀಕರ ಮಳೆಯಿಂದ ತೊಂದರೆಗಿಡಾದಾಗ ಉಸ್ತುವಾರಿ ಸಚಿವರು, ಕಂದಾಯ ಸಚಿವರು, ಕೃಷಿ ಸಚಿವರು ಉತ್ತರ ಕರ್ನಾಟಕ ಪ್ರವಾಸ ಮಾಡಲಿಲ್ಲ. ರೈತರು ಇಂದು ಮತ್ತೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಕಿಂಚಿತ್ತೂ ತಲೆ ಕೆಡಸಿಕೊಳ್ಳದೇ ಇದ್ದಾಗ ನಾವು ಹೋರಾಟಕ್ಕೆ ಬಂದಿದ್ದೇವೆ ಎಂದರು.
6 ಮಿಲಿಯನ್ ಟನ್ ಕಬ್ಬು ನುರಿಸುತ್ತಾರೆ, 50-60ಸಾವಿರ ಕೋಟಿ ರಾಜ್ಯ ಸರಕಾರಕ್ಕೆ ಅದರಿಂದ ಆದಾಯ ಬರುತ್ತಿದೆ. ಸಂಕಷ್ಟದಲ್ಲಿರುವ ರೈತರ ಪರಿಸ್ಥಿತಿ ಕೇಳುವುದಕ್ಕೆ ಸರಕಾರ ಮುಂದಾಗುತ್ತಿಲ್ಲ ಎಂದು ಸರಕಾರದ ವಿರುದ್ದ ಅಸಮಾಧಾನ ಹೊರಹಾಕಿದರು.
ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಮಾಜಿ ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಬಿಜೆಪಿ ಮುಖಂಡ ಎಂ.ಬಿ.ಜೀರಲಿ ಎಸ್ ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಯಲ್ಲೇಶ ಕಾಲಕಾರ, ಯುವರಾಜ್ ಜಾದವ್, ಶಾಸಕ ಅಭಯ್ ಪಾಟೀಲ್,ರವಿ ಪಾಟೀಲ, ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರ್, ಸೇರಿದಂತೆ ಮತ್ತಿತ್ತರರು ಇದ್ದರು.

