ಹೊಸ ದಿಗಂತ ಡಿಜಿಟಲ್ ಡೆಸ್ಕ್
ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಈಗಾಗಲೇ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಭರ್ಜರಿ ತಯಾರಿ ನಡೆಸುತ್ತಿದ್ದು, ಪಕ್ಷದ ಅಧ್ಯಕ್ಷ ನಟ ವಿಜಯ್ ದಳಪತಿ ನೇತೃತ್ವದಲ್ಲಿ ಇಂದು ಚೆನ್ನೈ ಬಳಿಯ ಮಹಾಬಲಿಪುರಂನ ಖಾಸಗಿ ಹೋಟೆಲ್ನಲ್ಲಿ ವಿಶೇಷ ಸಭೆ ನಡೆಯಿತು.
ಸಭೆಯಲ್ಲಿ ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡಿನ ಭಾರತೀಯ ಮೀನುಗಾರರ ಪದೇ ಪದೇ ಬಂಧನ, ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ, ಕೊಯಮತ್ತೂರಿನಲ್ಲಿ ಇತ್ತೀಚಿಗೆ ಮಹಿಳೆ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಸೇರಿದಂತೆ ಒಟ್ಟು 12 ವಿಷಯಗಳ ಕುರಿತು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಜೊತೆಗೆ ಎಲ್ಲಾ ವರ್ಗದ ಜನರಿಂದ ಪ್ರೀತಿಸಲ್ಪಡುವ ವಿಜಯ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ 2026 ರ ಚುನಾವಣೆಯನ್ನು ಎದುರಿಸಲಿದ್ದೇವೆ. ಚುನಾವಣಾ ಮೈತ್ರಿಕೂಟದ ಬಗ್ಗೆ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಅಧಿಕಾರ ನೀಡಲಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಸೆಪ್ಟೆಂಬರ್ 27 ರಂದು ಕರೂರ್ನಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ 41 ಜನರಿಗೆ ಸದಸ್ಯರು ಎರಡು ನಿಮಿಷಗಳ ಮೌನ ಆಚರಿಸಿದರು. ಟಿವಿಕೆ ಪಕ್ಷದ ಕಾರ್ಯಕ್ರಮಗಳಲ್ಲಿ ವಿಜಯ್ ಮತ್ತು ಸಾರ್ವಜನಿಕರಿಗೆ ಸಾಕಷ್ಟು ಪೊಲೀಸ್ ರಕ್ಷಣೆ ನೀಡಬೇಕೆಂದು ನಿರ್ಣಯವೊಂದರಲ್ಲಿ ಒತ್ತಾಯಿಸಲಾಗಿದೆ.

