ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಶುಕ್ರವಾರ ಪದವಿ ಪ್ರದಾನ ಮಾಡಲಾಯಿತು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು, 1994ರಲ್ಲಿ ಪ್ರಥಮ ಬಾರಿಗೆ ಶಾಸಕನಾದ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ತಾವು 35ನೇ ವರ್ಷದಲ್ಲಿ ವಿಧಾನಸಭೆಗೆ ಪ್ರವೇಶ ಮಾಡುತ್ತಿದ್ದೀರಿ, ಕ್ಷೇತ್ರದ ಅಭಿವೃದ್ಧಿಯ ಕನಸು ಬಗ್ಗೆ ವಿವರಿಸಿ ಎಂಬ ಪ್ರಶ್ನೆ ಕೇಳಿದ್ದರು.ಆ ಸಂದರ್ಭದಲ್ಲಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದ್ದೆ.ಅದರಂತೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿಯಲ್ಲಿ ಆಗಲು ಶ್ರಮಿಸಿದ್ದೇನೆ. ಜೊತೆಗೆ ಕುಶಾಲನಗರದಲ್ಲಿ ಎಂಜಿನಿಯರಿಂಗ್ ಕಾಲೇಜು, ಚಿಕ್ಕಳುವಾರದಲ್ಲಿ ಸ್ನಾತಕೋತ್ತರ ಪದವಿ ಕೇಂದ್ರ, ಪ್ರಸ್ತುತ ಬಜೆಟ್ನಲ್ಲಿ ಸರ್ಕಾರ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಮುಂದಾಗಿದೆ. ಹೀಗೆ ಕಳೆದ ಮೂರು ದಶಕದಲ್ಲಿ ಜನಪ್ರತಿನಿಧಿ ಆಗಿ ಶೈಕ್ಷಣಿಕ, ಆರೋಗ್ಯ ಮತ್ತು ಮೂಲ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಿ ನುಡಿದಂತೆ ನಡೆದಿದ್ದೇನೆ ಎಂದು ತಿಳಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಜಾಗ ಕಾಯ್ದಿರಿಸಿದ ಅಂದು ಜಿಲ್ಲಾಧಿಕಾರಿಯಾಗಿದ್ದ ಡಾ.ಎನ್.ವಿ.ಪ್ರಸಾದ್ ಹಾಗೂ ಅಪರ ಜಿಲ್ಲಾಧಿಕಾರಿಯಾಗಿದ್ದ ಡಾ.ಎನ್.ಶಿವಶಂಕರ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು ಎಂದ ಅವರು, ಆ ಸಂದರ್ಭದಲ್ಲಿ ಸರ್ಕಾರ 160 ಕೋಟಿ ರೂ. ಮಂಜೂರು ಮಾಡಿತ್ತು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 400 ಹಾಸಿಗೆ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಸರ್ಕಾರ 100 ಕೋಟಿ ರೂ.ಬಿಡುಗಡೆ ಮಾಡಿದೆ ಎಂದು ಅಪಚ್ಪುರಂಜನ್ ಅವರು ನುಡಿದರು.
‘ಕೋವಿಡ್ ಸಂದರ್ಭದಲ್ಲಿ 35 ಸಾವಿರಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ. ಕೋವಿಡ್ ಕಾಲಘಟ್ಟದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಇಲ್ಲದಿದ್ದರೆ ಹೇಗೆ ಎಂಬುದನ್ನು ಊಹಿಸಿಕೊಳ್ಳುವುದೂ ಅಸಾಧ್ಯ ಎಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು, ವೈದ್ಯಕೀಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಪಡೆದುಕೊಳ್ಳಬೇಕು. ಸಮಾಜಕ್ಕೆ ಒಳಿತು ಮಾಡಬೇಕು ಎಂದು ಶಾಸಕರು ಕರೆ ನೀಡಿದರು.
ಜನತೆ ಮರೆತಿಲ್ಲ: ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಎಂಬಿಬಿಎಸ್ ಪದವಿ ಪೂರ್ಣಗೊಳಿಸಿ ಮೊದಲ ಬ್ಯಾಚ್ ತೇರ್ಗಡೆಯಾಗಿ ವೈದ್ಯಕೀಯ ವೃತ್ತಿ ಜೀವನಕ್ಕೆ ಕಾಲಿರಿಸುತ್ತಿರುವುದು ಸಂತಸದ ವಿಷಯ. ವಿಶ್ವವ್ಯಾಪಿ ಕೋವಿಡ್ ಶುರುವಾದಾಗ, ಅದರಲ್ಲೂ ಎರಡನೇ ಅಲೆ ಸಂದರ್ಭದಲ್ಲಿ ತಮ್ಮ ವೈದ್ಯಕೀಯ ಸೇವೆಯನ್ನು ಕೊಡಗಿನ ಜನತೆ ಮರೆತಿಲ್ಲ ಎಂದು ಹೇಳಿದರು.
‘ಕೊಡಗು ಜಿಲ್ಲೆಯಲ್ಲಿ ವೈದ್ಯಕೀಯ ಪದವಿ ಪಡೆದು ವೈದ್ಯಕೀಯ ವೃತ್ತಿ ಜೀವನ ಆರಂಭಿಸುತ್ತಿರುವ ವೈದ್ಯರು ಜನ ಸಾಮಾನ್ಯರಿಗೆ ಸ್ಪಂದಿಸಬೇಕು. ವೃತ್ತಿಯ ಘನತೆ ಮರೆಯಬಾರದು. ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು ಜನಪ್ರಿಯ ವೈದ್ಯರಾಗಿ ಹೆಸರು ಗಳಿಸಬೇಕು ಎಂದು ಅವರು ಹೇಳಿದರು. ಅಲ್ಲದೆ ಕಾಲೇಜು ಆರಂಭ ಸಂದರ್ಭದಲ್ಲಿ ನಿರ್ದೇಶಕರಾಗಿದ್ದ ಮಹೇಂದ್ರ ಅವರ ಪಾತ್ರವನ್ನು ಸ್ಮರಿಸಿದರು.
ಹಲವು ಎಡರು ತೊಡರುಗಳು: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿವಿಯ ನಿರ್ದೇಶಕ ಡಾ.ಮಹೇಂದ್ರ ಅವರು ಮಾತನಾಡಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆರಂಭದಲ್ಲಿ ಹಲವು ಎಡರು ತೊಡರುಗಳ ನಡುವೆ ಈ ಹಂತಕ್ಕೆ ಬರಲಾಗಿದೆ. ಜಾಗ ಗುರುತಿಸುವುದು ಮತ್ತು ಕಾಲೇಜಿನ ಅಭಿವೃದ್ಧಿಗೆ ಇಲ್ಲಿನ ಶಾಸಕದ್ವಯರು ತುಂಬಾ ಶ್ರಮಿಸಿದ್ದಾರೆ ಎಂದರು.
‘ಸರ್ಕಾರ ವೈದ್ಯಕೀಯ ಕ್ಷೇತ್ರಕ್ಕೆ ಇಷ್ಟೆಲ್ಲಾ ಹೆಚ್ಚಿನ ಅವಕಾಶ ನೀಡಿದೆ. ಆ ನಿಟ್ಟಿನಲ್ಲಿ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು ವ್ಯಾಪಾರ ಮನೋಭಾವ ಹೊಂದದೆ, ಸಾಮಾಜಿಕ ಕಳಕಳಿಯಿಂದ ವೈದ್ಯಕೀಯ ವೃತ್ತಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.’
ವೈದ್ಯಕೀಯ ವೃತ್ತಿ ಪ್ರತ ದಿನವೂ ಸವಾಲಿನಿಂದ ಕೂಡಿರುತ್ತದೆ. ನಿರಂತರ ಅಧ್ಯಯನದ ಜೊತೆಗೆ ಸಮಾಜದ ಕಟ್ಟಕಡೆಯ ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಮಹೇಂದ್ರ ಅವರು ಹೇಳಿದರು.
ಬೆಂಗಳೂರಿನ ಫೊರ್ಟಿಸ್ ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥ ಡಾ.ವಿವೇಕ್ ಜವಳಿ ಅವರು ಮಾತನಾಡಿ, ವೈದ್ಯಕೀಯ ಕ್ಷೇತ್ರವು ತನ್ನದೇ ಆದ ಮಹತ್ವ ಹೊಂದಿದ್ದು, ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು. ಒಳ್ಳೆಯ ಹೆಸರು ಪಡೆಯಲು ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ, ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್, ಡಾ.ಮಂಜುನಾಥ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ.ಜಯಲಕ್ಷ್ಮೀ ಪಾಟ್ಕರ್, ಎಂ.ಎ.ನಿರಂಜನ ಮತ್ತಿತರರು ಇದ್ದರು.