ಹೊಸದಿಗಂತ ವರದಿ,ಮಂಗಳೂರು:
ಸರ್ವೋಚ್ಚ ನ್ಯಾಯಾಲಯವು ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತಾಗಿ ನೀಡಿರುವ ಆದೇಶವನ್ನು ಚುನಾವಣಾ ಆಯೋಗ ರಾಜ್ಯಕ್ಕೆ ಅನ್ವಯಿಸಿದರೆ ಬಿಜೆಪಿಗೆ ಯಾವುದೇ ಆತಂಕ ಇಲ್ಲ. ಪಕ್ಷವು ಬಿಬಿಎಂಪಿ ಸಹಿತ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಅವರು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಪೇಜ್ ಪ್ರಮುಖ್, ಪೇಜ್ ಒಂದರ ಉಸ್ತುವಾರಿಗೆ ಆರು ಮಂದಿಯ ತಂಡವನ್ನು ನಿಯುಕ್ತಿ ಮಾಡಲಾಗಿದೆ. ಜೊತೆಗೆ ವಿವಿಧ ಸಮುದಾಯಗಳಿಂದ ಆಯ್ದ ಪಂಚರತ್ನಗಳನ್ನು ಪಕ್ಷದ ಸಂಘಟನೆಯ ದಿಸೆಯಲ್ಲಿ ಗುರುತಿಸಿ ಜವಾಬ್ದಾರಿ ವಹಿಸಲಾಗಿದೆ ಎಂದರು.
ಹಿಂದುಳಿದ ವರ್ಗಗಳ ಮೀಸಲಾತಿ ಹೊರತಾಗಿ ಚುನಾವಣೆ ನಡೆದರೆ ಪಕ್ಷವು ಸಾಮಾನ್ಯ ಸ್ಥಾನಗಳ ಪೈಕಿ ಪ್ರತಿಶತ 33ಕ್ಕಿಂತ ಅಧಿಕ ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ದೊರಕಿಸಿ ಕೊಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ನುಡಿದರು.