ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಯಗೊಂಡು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ಸಹಪಾಠಿ ವಿದ್ಯಾರ್ಥಿಯೋರ್ವನನ್ನು ನೋಡಲು ತೆರಳಿದ್ದ ವಿದ್ಯಾರ್ಥಿಗಳಿಗೆ ಅವರದೇ ಕೋಮಿಗೆ ಸೇರಿದ ತಂಡವೊಂದು ಹಲ್ಲೆ ನಡೆಸಿ ನೈತಿಕ ಪೊಲೀಸ್ಗಿರಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ಎಂಬಲ್ಲಿ ನಡೆದಿದೆ.
ಉಪ್ಪಿನಂಗಡಿಯ ಕಾಲೇಜೊಂದರಲ್ಲಿ ಕಲಿಯುತ್ತಿರುವ ಪೆರಿಯಡ್ಕ ಮೂಲದ ವಿದ್ಯಾರ್ಥಿಯೋರ್ವ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಸಂದರ್ಭ ಕಾಲು ಮುರಿತಕ್ಕೆ ಒಳಗಾಗಿ ವಿಶ್ರಾಂತಿಯಲ್ಲಿದ್ದ. ಈ ಹಿನ್ನೆಲೆಯಲ್ಲಿ 10 ಮಂದಿ ಸಹಪಾಠಿಗಳು ಆತನ ಆರೋಗ್ಯ ವಿಚಾರಿಸಲೆಂದು ನ.6 ರಂದು ಮಧ್ಯಾಹ್ನ ಮನೆಗೆ ತೆರಳಿದ್ದರು. ಈ ವಿದ್ಯಾರ್ಥಿಗಳಲ್ಲಿ ಇಬ್ಬರು ಒಂದು ಧರ್ಮಕ್ಕೆ ಸೇರಿದವರಾಗಿದ್ದರೆ, ನಾಲ್ವರು ವಿದ್ಯಾರ್ಥಿಗಳು ಮತ್ತು ನಾಲ್ವರು ವಿದ್ಯಾರ್ಥಿನಿಯರು ಇನ್ನೊಂದು ಧರ್ಮಕ್ಕೆ ಸೇರಿದವರಾಗಿದ್ದರು. ಈ ವಿದ್ಯಾರ್ಥಿಗಳು ಆತನ ಮನೆಯಿಂದ ವಾಪಸಾಗುತ್ತಿದ್ದಾಗ ಯುವಕರ ಗುಂಪೊಂದು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ, ಈ ಪರಿಸರದಲ್ಲಿ ಬುರ್ಖಾಧಾರಿ ವಿದ್ಯಾರ್ಥಿನಿಯರೊಂದಿಗೆ ಸುತ್ತಾಡುತ್ತಿರುವುದಕ್ಕೆ ಆಕ್ಷೇಪಿಸಿ ವಿದ್ಯಾರ್ಥಿ ಶಾಲಿಮ್ ಎಂಬವರ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಪ್ರಾರಂಭದಲ್ಲಿ ಹಿಂದು ವಿದ್ಯಾರ್ಥಿಗಳ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ ನಡೆದಿದೆ ಎಂಬ ವದಂತಿ ಹರಡಿ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಹಲ್ಲೆ ನಡೆಸಿದವರು ಮತ್ತು ಹಲ್ಲೆಗೊಳಗಾದವರು ಒಂದೇ ಕೋಮಿನವರೆಂದು ಬಳಿಕ ತಿಳಿದು ಬಂದು ಉದ್ವಿಗ್ನತೆ ಶಮನಗೊಂಡಿತ್ತು. ಆದರೂ ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್ಗಿರಿ ನಡೆಸಿದ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತ್ವರಿತ ಕಾರ್ಯಾಚರಣೆ ನಡೆಸಿ ಹಲ್ಲೆ ನಡೆಸಿದ ತಂಡದ ನೇತೃತ್ವ ವಹಿಸಿದ್ದವರೆನ್ನಲಾದ ಪೆರಿಯಡ್ಕ ನಿವಾಸಿಗರಾದ ಮಹಮ್ಮದ್ ಮುಸ್ತಾಫ (40) ಹಾಗೂ ಮುಸ್ತಾಫ (31) ಎಂಬವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಿದ್ದಾರೆ.

