ಹೊಸದಿಗಂತ ಡಿಜಿಟಲ್ ಡೆಸ್ಕ್
ನೂಪುರ್ ಶರ್ಮಾ ಪ್ರವಾದಿ ಕುರಿತಾಗಿ ನೀಡಿದ್ದ ಹೇಳಿಕೆಗಳನ್ನು ಮುಂದಿರಿಸಿಕೊಂಡು ಕೋಮುವಾದಿ ಶಕ್ತಿಗಳು ಹಿಂಸಾಕೃತ್ಯ ಎಸಗುತ್ತಿವೆ. ಧರ್ಮದ ವಿಚಾರವನ್ನು ಮುನ್ನೆಲೆಗೆ ತಂದು ಅಂತಾರಾಷ್ಟ್ರೀಯವಾಗಿ ಭಾರತಕ್ಕೆ ಮುಜುಗರ ತರಲು ವಿಧ್ವಂಸಕ ಗುಂಪುಗಳು ಯತ್ನಿಸುತ್ತಿವೆ.
ಇಂತಹದ್ದೊಂದು ಅವಕಾಶಕ್ಕೆ ಕಾದಿದ್ದಂತೆ ವರ್ತಿಸುತ್ತಿರುವ ಗುಂಪುಗಳು ಪ್ರತಿಭಟನೆಯ ಹೆಸರಿನಲ್ಲಿ ದೇಶದ ವಿವಿಧ ನಗರಗಳಲ್ಲಿ ಕಲ್ಲುತೂರಾಟ ನಡೆಸಿ ಗಲಭೆ ಸೃಷ್ಟಿಗೆ ಯತ್ನಿಸುತ್ತಿವೆ. ಆದರೆ ಈ ನಡುವೆ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾಗೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಜನರು ನೂಪುರ್ ಪರವಾಗಿ ಧ್ವನಿಯೆತ್ತುತ್ತಿದ್ದಾರೆ.
ನೂಪುರ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಗುಜರಾತ್ ನ ಅಹಮದಾಬಾದ್ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ಆಯೋಜಿಸಲಾಗಿತ್ತು. ಅದಾಗಿ ಒಂದು ದಿನದ ಬಳಿಕ ನೂಪುರ್ ಶರ್ಮಾರನ್ನು ಬೆಂಬಲಿಸಿ ಹಾಗೂ ಹಿಂದೂಗಳ ಒಗ್ಗಟನ್ನು ಪ್ರದರ್ಶಿಸಲು ಸಹಸ್ರಾರು ಜನರು ಸರ್ಖೇಜ್- ಗಾಂಧಿನಗರ ಹೆದ್ದಾರಿಯಲ್ಲಿ ಜಮಾಯಿಸಿದ್ದಾರೆ. ಇಸ್ಕಾನ್ ಕ್ರಾಸ್ ರೋಡ್ನಲ್ಲಿ ಸಾಗುತ್ತಿದ್ದ ಬೃಹತ್ ರ್ಯಾಲಿಗೆ ವಿವಿಧ ಕಾರಣ ಮುಂದೊಡ್ಡಿ ಪೊಲೀಸರು ತಡೆದಿದ್ದಾರೆ.
ಈ ವೇಳೆ ನಿರ್ಬಂಧ ಉಲ್ಲಂಘಿಸಿ ರ್ಯಾಲಿಯಲ್ಲಿ ಸಾಗುತ್ತಿದ್ದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಕ್ಷುದ್ರಗೊಂಡ ಪ್ರತಿಭಟನಾಕಾರರು, ದರಿಯಾಪುರ ಹಾಗೂ ಟೀನ್ ದರ್ವಾಜಾದಲ್ಲಿ ಮುಸ್ಲಿಂ ಗುಂಪುಗಳು ಪ್ರತಿಭಟನೆಗೆ ಅವಕಾಶ ನೀಡುತ್ತೀರಿ ಎಂದಾದಲ್ಲಿ ಹಿಂದೂಗಳಿಗೆ ಏಕೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನೆರೆದಿದ್ದ ಜನರು ನೂಪುರ್ ಶರ್ಮಾ ಬೆಂಬಲಕ್ಕೆ ಇಡಿ ಜನಸಮೂಹ ನಿಲ್ಲುವುದಾಗಿ ಘೋಷಣೆಗಳನ್ನು ಕೂಗಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ