ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸೋತ ಬಳಿಕ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಡಿ ಭಾರತ ತಂಡ 2-1 ಅಂತರದಿಂದ ಸರಣಿಯನ್ನು ಗೆದ್ದರೂ, ಕೋಚ್ ಗೌತಮ್ ಗಂಭೀರ್ ತಂಡದ ಸ್ಥಿತಿಯಿಂದ ಸಂಪೂರ್ಣ ತೃಪ್ತರಾಗಿಲ್ಲ. ಅವರ ಪ್ರಕಾರ, 2026ರ ಟಿ20 ವಿಶ್ವಕಪ್ಗೆ ತಂಡ ದೈಹಿಕವಾಗಿ ಹಾಗೂ ಮಾನಸಿಕವಾಗಿ ಇನ್ನೂ ಸಂಪೂರ್ಣ ಸಿದ್ಧವಾಗಿಲ್ಲ.
ಸಂದರ್ಶನವೊಂದರಲ್ಲಿ ಮಾತನಾಡಿದ ಗಂಭೀರ್, ಟೀಮ್ ಇಂಡಿಯಾ ಫಿಟ್ನೆಸ್ ದೃಷ್ಟಿಯಿಂದ “ನಾವು ಬಯಸುವ ಮಟ್ಟದಲ್ಲಿ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. “ಐಸಿಸಿಯಂತಹ ದೊಡ್ಡ ಟೂರ್ನಿಯಲ್ಲಿ ಒತ್ತಡ ತುಂಬಾ ಹೆಚ್ಚಿರುತ್ತದೆ. ಇಂತಹ ಸಂದರ್ಭಗಳಲ್ಲಿ ದೈಹಿಕ ಫಿಟ್ನೆಸ್ ಮಾತ್ರವಲ್ಲ, ಅದು ಆಟಗಾರರ ಮಾನಸಿಕ ಬಲದ ಮೇಲೆಯೂ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ, ಪ್ರತಿಯೊಬ್ಬ ಆಟಗಾರರು ತಮ್ಮ ಫಿಟ್ನೆಸ್ ಕಡೆ ಹೆಚ್ಚಿನ ಗಮನ ಹರಿಸಬೇಕು,” ಎಂದಿದ್ದಾರೆ.
ಇದೇ ವೇಳೆ, ಮುಂಬರುವ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿರುವುದರಿಂದ ಅದು ಅತ್ಯಂತ ಮಹತ್ವದ್ದೆಂದು ಗಂಭೀರ್ ಹೇಳಿದ್ದಾರೆ. “ಸೌತ್ ಆಫ್ರಿಕಾ ಈಗಾಗಲೇ ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ಅವರನ್ನು ಸೋಲಿಸುವುದು ನಮ್ಮ ತಂಡಕ್ಕೆ ಆತ್ಮವಿಶ್ವಾಸ ನೀಡುತ್ತದೆ,” ಎಂದು ಅವರು ಹೇಳಿದ್ದಾರೆ.
ಟಿ20 ವಿಶ್ವಕಪ್ ತವರಿನಲ್ಲಿ ನಡೆಯಲಿರುವುದರಿಂದ, ಅದನ್ನು ಗೆಲ್ಲುವ ಗುರಿಯು ಭಾರತದ ಮುಂದಿದೆ. ಗಂಭೀರ್ ಅಭಿಪ್ರಾಯದಲ್ಲಿ ಮುಂದಿನ ಮೂರು ತಿಂಗಳುಗಳು ತಂಡಕ್ಕೆ ಅತ್ಯಂತ ನಿರ್ಣಾಯಕವಾಗಿದ್ದು, ಪ್ರತಿಯೊಬ್ಬ ಆಟಗಾರರು ತಮ್ಮ ದೈಹಿಕ ಸಾಮರ್ಥ್ಯ ಮತ್ತು ಮನೋಬಲವನ್ನು ಹೆಚ್ಚಿಸಲು ಬದ್ಧರಾಗಿರಬೇಕು ಎಂದು ಸೂಚಿಸಿದ್ದಾರೆ.

