ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೊನಾ ಮಹಾಮಾರಿ ನಡುವೆಯೇ ಕೇರಳದಲ್ಲಿ ಆಂಥ್ರಾಕ್ಸ್ ಸಂಚಲನ ಮೂಡಿಸುತ್ತಿದೆ. ರಾಜ್ಯದಲ್ಲಿ ಈಗಾಗಲೇ ನಿಫಾ, ಹಂದಿಜ್ವರ, ಮಂಗನ ಜ್ವರದ ಜೊತೆಗೆ, ಹೊಸ ಆಂಥ್ರಾಕ್ಸ್ ರೋಗ ಉಲ್ಬಣಗೊಳ್ಳುತ್ತಿದೆ. ಆಂಥ್ರಾಕ್ಸ್, ಬ್ಯಾಸಿಲಸ್ ಆಂಥ್ರಾಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆಯಾಗಿದೆ. ಅತ್ತಿರಪ್ಪಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳು ಈ ರೋಗದಿಂದ ಸಾಯುತ್ತಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಐದರಿಂದ ಆರು ಕಾಡುಹಂದಿಗಳು ಸಾವನ್ನಪ್ಪಿದ್ದು, ಅವುಗಳ ಕಳೇಬರವನ್ನು ಪರೀಕ್ಷಿಸಿದಾಗ ಆಂಥ್ರಾಕ್ಸ್ನಿಂದ ಸಾವನ್ನಪ್ಪಿರುವುದಾಗಿ ದೃಢಪಟ್ಟಿದೆ.
ಘಟನೆಯ ಬಗ್ಗೆ ರಾಜ್ಯ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಜಾನುವಾರು ಅಥವಾ ಮನುಷ್ಯರಿಗೆ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಾನುವಾರು, ಮೇಕೆ, ಕುರಿ ಸೇರಿದಂತೆ ವನ್ಯಜೀವಿಗಳಲ್ಲಿ ಈ ರೋಗ ಹೆಚ್ಚಾಗಿ ಕಂಡುಬರುತ್ತದೆ. ಸೋಂಕಿತ ಪ್ರಾಣಿಗಳ ಮಾಂಸವನ್ನು ತಿನ್ನುವ ಜನರು ರೋಗಕ್ಕೆ ತುತ್ತಾಗುವ ಅಪಾಯ ಹೆಚ್ಚು ಎಂದು ತಜ್ಞರು ಎಚ್ಚರಿಸಿದ್ದಾರೆ.
ಆಂಥ್ರಾಕ್ಸ್ನ ಲಕ್ಷಣಗಳು ಮೂರು ದಿನಗಳಲ್ಲೇ ಕಂಡುಹಿಡಿಯಬಹುದು ಎಂದು ತಜ್ಞರು ಹೇಳುತ್ತಾರೆ. ಹೆಚ್ಚಿನ ಜ್ವರ, ಅತಿಸಾರ, ಉಸಿರಾಟದ ತೊಂದರೆ, ಚರ್ಮದ ಹುಣ್ಣು, ಶೀತ ಮತ್ತು ವಾಂತಿ ಮುಂತಾದ ರೋಗಲಕ್ಷಣಗಳನ್ನು ಹೊಂದಿದೆ. ಈ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಜೀವಕ್ಕೆ ಅಪಾಯ. ಅತಿರಪ್ಪಿಳ್ಳಿ ಅರಣ್ಯದಲ್ಲಿ ಆಂಥ್ರಾಕ್ಸ್ನಿಂದ ಹಂದಿಗಳು ಸಾಯುವ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.