ಹೊಸ ದಿಗಂತ ವರದಿ, ತುಮಕೂರು :
ಕಾಮಗಾರಿ ಬಿಲ್ ಮಾಡಿಕೊಡಲು ಗುತ್ತಿಗೆದಾರದ ಬಳಿ ಲಂಚಕ್ಕೆ ಕೈ ಒಡ್ಡಿದ ಇಬ್ಬರು ಇಂಜಿನಿಯರ್ ಗಳು ಮಂಗಳವಾರ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ನಗರದ ಪ್ರವಾಸಿ ಮಂದಿರದ ಬಳಿ 34,500 ಲಂಚದ ಹಣ ತೆಗೆದುಕೊಳ್ಳುವ ಸಮಯದಲ್ಲಿ ಸಹಾಯಕ ಕಾರ್ಯಪಲಕ ಇಂಜಿನಿಯರ್ ಬಿ.ಸಿ. ಸ್ವಾಮಿ ಎಂಬುವರನ್ನು ಲೋಕಾಯುಕ್ತ ಪೊಲೀಸರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಧ್ಯವರ್ತಿಯಾಗಿ ಕೆಲಸ ಮಾಡಿದ ಕಂಪ್ಯೂಟರ್ ಆಪರೇಟರ್ ಹರೀಶ್ ಎಂಬುವರ ವಿಚಾರಣೆ ಮುಂದುವರೆದಿದೆ.
ತಿಪಟೂರು ತಾಲ್ಲೂಕಿನ ಶಾಲೆಯ ದುರಸ್ತಿ ಮಾಡಿದ 6.5 ಲಕ್ಷ ಬಿಲ್ ಪಾವತಿಗೆ ಹೊಸದುರ್ಗ ಭಾಗದ ಗುತ್ತಿಗೆದಾರ ಸುನಿಲ್ ಮನವಿ ಮಾಡಿಕೊಂಡಿದ್ದರು. ಬಿಲ್ ಹಣ ಪಾವತಿಗೆ 47,500 ಲಂಚಕ್ಕೆ ಇಬ್ಬರು ಇಂಜಿನಿಯರ್ ಗಳು ಬೇಡಿಕೆ ಇಟ್ಟಿದ್ದರು. ( ಸಹಾಯಕ ಕಾರ್ಯಪಲಕ ಇಂಜಿನಿಯರ್ ಬಿ.ಸಿ. ಸ್ವಾಮಿ, ಎಇಇ ಸುಹಾಸ್ ) ಮೊದಲ ಕಂತಿನಲ್ಲಿ 13 ಸಾವಿರ ರೂಪಾಯಿಗಳನ್ನು ಕಂಪ್ಯೂಟರ್ ಆಪರೇಟರ್ ಹರೀಶ್ ಬ್ಯಾಂಕ್ ಅಕೌಂಟ್ ಗೆ ಸುನೀಲ್ ವರ್ಗಾವಣೆ ಮಾಡಿದ್ದರು. ಉಳಿದ 34,500 ಹಣವನ್ನು ತೆಗೆದುಕೊಳ್ಳುವ ಸಮಯದಲ್ಲಿ ಸ್ವಾಮಿ ಸಿಲುಕಿದ್ದಾರೆ.
ಪ್ರತಿನಿತ್ಯ ಸ್ವಾಮಿ ತುಮಕೂರಿನಿಂದ ತಿಪಟೂರಿಗೆ ರೈಲಿನಲ್ಲಿ ಹೋಗಿ ಬರುತ್ತಿದ್ದರು. ಮಂಗಳವಾರ ರೈಲು ನಿಲ್ದಾಣಕ್ಕೆ ತೆರಳುವ ಮುನ್ನ ಪ್ರವಾಸಿ ಮಂದಿರದ ಬಳಿ ಹಣ ತೆಗೆದುಕೊಳ್ಳುತ್ತಿದ್ದಾಗ ದಾಳಿ ಮಾಡಲಾಗಿದೆ. ಲೋಕಾಯುಕ್ತ ವರಿಷ್ಠಾಧಿಕಾರಿ ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ದಾಳಿ ನಡೆದಿದೆ.

