ಹೊಸದಿಗಂತ ಡಿಜಿಟಲ್ ಡೆಸ್ಕ್:
ಘಟ್ಟ ಪ್ರದೇಶ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟವು ಸಂಪೂರ್ಣ ಜಲಾವೃತವಾಗಿದೆ. ಭಕ್ತರು ನದಿ ತಟದಲ್ಲಿ ಪುಣ್ಯಸ್ನಾನ ಮಾಡುವ ದೃಶ್ಯ ಕಂಡುಬಂತು.
ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಶ್ರೀ ದೇವರ ಜಳಕದ ಕಟ್ಟೆಯು ಜಲಾವೃತವಾಗಿದೆ. ಭಕ್ತರ ಅನುಕೂಲಕ್ಕಾಗಿ ಸ್ನಾನಘಟ್ಟದಲ್ಲಿ ನಿರ್ಮಿತವಾಗಿದ್ದ ಶೌಚಾಲಯವು ಅರ್ಧದಷ್ಟು ಮುಳುಗಡೆಗೊಂಡಿದೆ. ಈ ಭಾಗದಲ್ಲಿ ಮತ್ತೆ ನದಿ ತೊರೆ, ಹೊಳೆಗಳಲ್ಲಿ ನೀರಿನ ಮಟ್ಟ ಅಧಿಕವಾಗುತ್ತಾ ಸಾಗಿದೆ. ಕುಮಾರಧಾರಾ ನದಿಯ ಉಪನದಿಯಾದ ದರ್ಪಣತೀರ್ಥ ತುಂಬಿ ಹರಿಯುತ್ತಿದ್ದು, ನೀರಿನ ಹರಿವು ಅಧಿಕಗೊಂಡು ಸಮೀಪದ ಕೃಷಿ ತೋಟಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ.
ಮಳೆಯಿಂದಾಗಿ ಗ್ರಾಮೀಣ ಪ್ರದೇಶವಾದ ಬಾಳುಗೋಡು, ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು, ಪಂಜ, ಬಳ್ಪ, ಏನೆಕಲ್, ನಿಂತಿಕಲ್, ಬಿಳಿನೆಲೆ, ನೆಟ್ಟಣ ಮೊದಲಾದೆಡೆ ನದಿ ತೊರೆಗಳು ತುಂಬಿ ಹರಿಯುತ್ತಿವೆ. ಸುಬ್ರಹ್ಮಣ್ಯ ಸಮೀಪದ ದೇವರಹಳ್ಳಿ ಎಂಬಲ್ಲಿ ಹರಿಯುವ ನದಿ ತುಂಬಿ ಹರಿದು ಕುಜುಂಬಾರು ಪ್ರದೇಶಕ್ಕೆ ತೆರಳವ ರಸ್ತೆಯು ಜಲಾವೃತಗೊಂಡಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ