ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದೆಲ್ಲೆಡೆ ಚಳಿಗಾಲದ ಪ್ರಭಾವ ತೀವ್ರಗೊಂಡಿದ್ದು, ಬೆಂಗಳೂರಿನಿಂದ ಉತ್ತರ ಒಳನಾಡಿನವರೆಗೂ ತಾಪಮಾನ ಕುಸಿತ ಜನರನ್ನು ಚಳಿಯಿಂದ ನಡುಗಿಸುತ್ತಿದೆ. ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳು ಚಳಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಮುನ್ಸೂಚನೆ ಪ್ರಕಾರ, ಕಳೆದ ಶುಕ್ರವಾರ ಬೀದರ್ ಜಿಲ್ಲೆಯಲ್ಲಿ ತಾಪಮಾನ 10 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದ್ದು, ಇದು ರಾಜ್ಯದಲ್ಲಿ ಈ ಋತುವಿನ ಮೊದಲ ಗರಿಷ್ಠ ಚಳಿಯ ದಾಖಲು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ ದಿನಗಳಲ್ಲಿ ಉತ್ತರ ಒಳನಾಡು ಪ್ರದೇಶಗಳಲ್ಲಿ ಚಳಿಯ ಗಾಳಿ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಬೆಂಗಳೂರಿನಲ್ಲಿಯೂ ಕೂಡ ಮುಂಬರುವ ವಾರಗಳಲ್ಲಿ ಬೆಳಗಿನ ತಾಪಮಾನದಲ್ಲಿ ಹೆಚ್ಚಿನ ಕುಸಿತ ಕಾಣಬಹುದು ಎಂದು ಅಂದಾಜಿಸಲಾಗಿದೆ.
ಬೆಂಗಳೂರು, ಬೆಳಗಾವಿ, ವಿಜಯಪುರ, ಧಾರವಾಡ, ಮೈಸೂರು ಮತ್ತು ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಬಾರಿ ಚಳಿ ಸಾಮಾನ್ಯಕ್ಕಿಂತ ಹೆಚ್ಚು ಕಾಡುವ ನಿರೀಕ್ಷೆಯಿದೆ. ಮಳೆ ಪ್ರಮಾಣವೂ ಇತ್ತೀಚೆಗೆ ಕಡಿಮೆಯಾಗಿರುವುದರಿಂದ ವಾತಾವರಣ ಒಣಗಾಳಿ ಮತ್ತು ತಂಪಿನ ಸಂಯೋಗವನ್ನು ಕಾಣುತ್ತಿದೆ. ಕೆಲವೆಡೆ ಮೋಡ ಕವಿದ ವಾತಾವರಣವಿದ್ದರೂ, ಮಧ್ಯಾಹ್ನದಲ್ಲಿ ಸೂರ್ಯ ಕಿರಣಗಳು ಸ್ವಲ್ಪ ತಾಪಮಾನ ನೀಡುವ ಸಾಧ್ಯತೆ ಇದೆ.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಶೀತಗಾಳಿ ತೀವ್ರಗೊಂಡಿದ್ದು, ಆರೋಗ್ಯ ಇಲಾಖೆಯವರು ಜನರಿಗೆ ಬೆಚ್ಚಗಿರಲು ಮತ್ತು ಚಳಿ ಕಾರಣದಿಂದ ಉಂಟಾಗಬಹುದಾದ ಜ್ವರ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಂದ ಜಾಗ್ರತೆ ವಹಿಸಲು ಸಲಹೆ ನೀಡಿದ್ದಾರೆ.

