ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಬಳಿ ಅಕ್ರಮ ಆಸ್ತಿ ಇರುವುದು ಕಂಡುಬಂದಲ್ಲಿ ಬುಲ್ಡೋಜರ್ಗಳನ್ನು ತಂದು ನೆಲಸಮಗೊಳಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರಿಗೆ ಸಂಬಂಧಿಸಿದ ಅಪಾರ ಪ್ರಮಾಣದ ಆಸ್ತಿ ಇದ್ದು ಈ ಬಗ್ಗೆ ತನಿಖೆ ನಡೆಸುವಂತೆ ಕಲ್ಕತ್ತಾ ಹೈಕೋರ್ಟ್ನಲ್ಲಿ ಬಿಜೆಪಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಿತ್ತು. ಈ ಬಗ್ಗೆ ದೀದಿ ವ್ಯಾಖ್ಯೆಗಳನ್ನು ಮಾಡಿದ್ದಾರೆ.
ಕೋಲ್ಕತ್ತಾದ ಸಚಿವಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸರ್ಕಾರಿ ಜಾಗ ಒತ್ತುವರಿ ಮಾಡಿದ್ದೇನೆ ಎಂಬ ಆರೋಪ ಕೇಳಿ ಬಂದಿದೆ. ಈ ವಿಚಾರವಾಗಿ ನಮ್ಮ ಮುಖ್ಯ ಕಾರ್ಯದರ್ಶಿಗೆ ಹೇಳುತ್ತಿದ್ದೇನೆ. ತನಿಖೆಯಲ್ಲಿ ಯಾವುದಾದರೂ ಭೂಮಿ ಒತ್ತುವರಿ ಮಾಡಿರುವುದು ಕಂಡುಬಂದರೆ, ಆ ಆಸ್ತಿಗಳನ್ನು ಬುಲ್ಡೋಜರ್ ತಂದು ಉರುಳಿಸಿ ಬಿಡಿ ಎಂದು ಸೂಚಿಸಿದರು. ನಾನು ಸಮಾಜ ಸೇವೆಯಿಂದ ರಾಜಕೀಯಕ್ಕೆ ಬಂದೆ. ಈ ರೀತಿಯ ರಾಜಕೀಯವನ್ನು ಆಗಲೇ ನೋಡಿದ್ದರೆ ನಾನು ದೂರ ಉಳಿಯುತ್ತಿದ್ದೆ. ಕಲ್ಲಿದ್ದಲಿನ ಎಲ್ಲ ಹಣವೂ ಕಾಳಿಘಾಟ್ಗೆ ಹೋಗುತ್ತಿದೆ ಅಂತಿದಾರೆ ಕಾಳಿಘಾಟ್ ಎಲ್ಲಿದೆ ಹೇಳಿ? ಎಂದು ಪ್ರಶ್ನಿಸಿದರು.
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಮಮತಾ ಅವರ ಸೋದರಳಿಯನಿಗೆ ಇಡಿ ಸಮನ್ಸ್ ಜಾರಿ ಮಾಡಿರುವುದು ಗೊತ್ತೇ ಇದೆ. ಈ ಬಗ್ಗೆ ಮುಂದಿನ ಶುಕ್ರವಾರ ವಿಚಾರಣೆ ನಡೆಯಲಿದೆ.