ಹೊಸದಿಗಂತ ವರದಿ, ಹುಬ್ಬಳ್ಳಿ:
ಇಲ್ಲಿಯ ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ಸೆ. 8 ರಿಂದ 11 ರ ವರೆಗೆ ಭಾರತ ʼಎʼ ಹಾಗೂ ನ್ಯೂಜಿಲೆಂಡ್ ʼಎʼ ತಂಡಗಳ ನಡುವೆ ಟೆಸ್ಟ್ ಹಣಾಹಣಿ ನಡೆಯಲಿದೆ. ಈ ಪಂದ್ಯ ವೀಕ್ಷಿಸಲು 2 ಸಾವಿರ ಜನರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಕೆಎಸ್ ಸಿಎ ಧಾರವಾಡ ಝೋನ್ ಸಂಚಾಲಕ ಅವಿನಾಶ ಪೊತ್ದಾರ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ನೋಂದಾಯಿತ ಅಕಾಡೆಮಿಯ ಕ್ರಿಕೆಟ್ ಕಲಿಕಾ ಆಟಗಾರರ ವೀಕ್ಷಣೆಗೆ ಅವಕಾಶಕ್ಕೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಬಂದು ಪಂದ್ಯ ವೀಕ್ಷಿಸಿ ಎಂದು ಮನವಿ ಮಾಡಿದ್ದಾರೆ.
ಕಳೆದ ಮೂರು ವರ್ಷದಿಂದ ಈ ಮೈದಾನದಲ್ಲಿ ಯಾವುದೇ ಪಂದ್ಯಗಳು ನಡೆದಿಲ್ಲ. ಈಗ ಬಿಸಿಸಿಐ ಅಂತರ ರಾಷ್ಟ್ರೀಯ ಪಂದ್ಯಕ್ಕೆ ಅವಕಾಶ ನೀಡಿದ್ದು, ಕೆಎಸ್ ಸಿಎ ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ಸಂತಸ ತಂದಿದೆ ಎಂದರು. ಬರುವ ದಿನಗಳಲ್ಲಿ ಅತೀ ಹೆಚ್ಚು ಪಂದ್ಯಗಳಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದ್ದು, ಪ್ರಸಕ್ತ ವರ್ಷ ಮೂರುನಾಲ್ಕು ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಐಪಿಎಲ್ ಪಂದ್ಯಗಳಿಗೂ ಅವಕಾಶ ನೀಡಬಹುದು ಎಂದರು.
ವೀರಣ್ಣ ಸವಡಿ, ಅಲ್ತಾಪ್ ಕಿತ್ತೂರ, ಜೂನಲ್ ಕಮಿಟಿ ಸದಸ್ಯ ಶಿವಾನಂದ ಗುಂಜಾಳ ಇದ್ದರು.