ಹೊಸದಿಗಂತ ಡಿಜಿಟಲ್ ಡೆಸ್ಕ್
ಹಿಜಾಬ್ ಕುರಿತ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅರ್ಜಿದಾರರನ್ನು ತ್ರೀವ ತರಾಟೆಗೆ ತೆಗೆದುಕೊಂಡಿದೆ. ನಿಮ್ಮ ರೀತಿಯಲ್ಲೇ ವಾದ ಮಾಡುವುದಾದರೆ ಬಟ್ಟೆ ಧರಿಸುವುದು ಮೂಲಭೂತ ಹಕ್ಕಾದರೆ, ವಿವಸ್ತ್ರಗೊಳ್ಳುವುದು ಒಳಗೊಂಡಿರುತ್ತದೆಯೇ ಎಂದು ಕೇಳಿದ್ದಾರೆ. ಈ ರೀತಿಯ ವಾದಕ್ಕೆ ತಾರ್ಕಿಕ ಅಂತ್ಯ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಹೇಮಂತ್ ಗುಪ್ತ ಹೇಳಿದ್ದಾರೆ. ಜೊತೆಗೆ ವಿಚಾರಣೆಯನ್ನು ನಾಳೆ(ಸೆ.08) 11ಗಂಟೆಗೆ ಮುಂದೂಡಿದೆ.
ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ವಾದ ಮಂಡಿಸಿದರು. ಹುಡುಗಿಯರು ಹಿಜಾಬ್ ವಸ್ತ್ರವನ್ನು ಒತ್ತಾಯಪೂರ್ವಕವಾಗಿ ಧರಿಸುತ್ತಿಲ್ಲ. ಇಷ್ಟಪಟ್ಟು, ಧರಿಸುತ್ತಿದ್ದಾರೆ. ಆರ್ಟಿಕಲ್ 19ರ ಅಡಿಯಲ್ಲಿ ನಮಗೆ ಇಷ್ಟೇ ಬಂದ ಬಟ್ಟೆ ಧರಿಸಿವುದು ಮೂಲಭೂತ ಹಕ್ಕಾಗಿದೆ. ಆದರೆ ಕರ್ನಾಟಕದಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ವಾದ ಮಂಡಿಸಿದರು.
ಈ ಹಿಂದೆ ಕರ್ನಾಟಕ ಹೈಕೋರ್ಟ್ನಲ್ಲಿ ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಎಂದು ವಾದಿಸಿದ್ದ ಕಾಮತ್, ಇದೀಗ ಹಿಜಾಬ್ ಕೇವಲ ಬಟ್ಟೆಯಾಗಿದ್ದು, ಇದು ಮೂಲಭೂತ ಹಕ್ಕಿನ ಅಡಿಯಲ್ಲಿ ಬರಲಿದೆ. ಹೀಗಾಗಿ ಇದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.
ಈ ವಾದಕ್ಕೆ ಅಸಮಾಧಾನಗೊಂಡ ನ್ಯಾಯಮೂರ್ತಿ ಹೇಮಂತ್ ಗುಪ್ತ , ನಿಮ್ಮ ರೀತಿಯ ವಾದ ಮಾಡುವುದಾದರೆ ಬಟ್ಟೆ ಧರಿಸುವುದು ಮೂಲಭೂತ ಹಕ್ಕಾದರೆ, ವಿವಸ್ತ್ರಗೊಳ್ಳುವುದು ಕೂಡ ಒಳಗೊಂಡಿರುತ್ತದೆಯೇ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ದೇವದತ್ ಕಾಮತ್, ನಾನು ಕ್ಲೀಷೆ ವಾದಕ್ಕೆ ಬಂದಿಲ್ಲ. ತರಗತಿಗಳಲ್ಲಿ ಯಾರೂ ವಿವಸ್ತ್ರಗೊಳ್ಳುವುದಿಲ್ಲ ಎಂದಿದ್ದಾರೆ. ಹಾಗಾದರೆ ಹಿಜಾಬ್ ಧರಿಸಲು ನಿರ್ಬಂಧ ಹೇರಿಲ್ಲ, ಕೇವಲ ತರಗತಿಗಳಲ್ಲಿ ಮಾತ್ರ ನಿಷೇಧಿಸಲಾಗಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಜಾತ್ಯಾತೀತ ರಾಷ್ಟ್ರದಲ್ಲಿ ಯಾಕೇ ಒಂದು ಧರ್ಮದ ಬಟ್ಟೆಗೆ ನಿರ್ಬಂಧ ಎಂದು ದೇವದತ್ ಪ್ರಶ್ನಿಸಿದ್ದು, ಇದಕ್ಕೆ ಉತ್ತರ ನೀಡಿದ ನ್ಯಾಯಮೂರ್ತಿ, ಭಾರತದ ಮೂಲ ಸಂವಿಧಾನದಲ್ಲಿ ಜ್ಯಾತ್ಯಾತೀತೆ ಅನ್ನೋ ಪದವೇ ಇಲ್ಲ ಎಂದಿದ್ದಾರೆ.
ಇದೀಗ ನಾಳೆಗೆ ವಿಚಾರಣೆ ಮುಂದೂಡಿದೆ.