ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ಖಾಸಗಿ ಕಾಲೇಜೊಂದರ ಹಾಸ್ಟೆಲ್ನಿಂದ ರಾತೋರಾತ್ರಿ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಕೊನೆಗೂ ಚೆನ್ನೈನಲ್ಲಿ ಪತ್ತೆಯಾಗಿದ್ದು, ಅವರನ್ನು ಪೊಲೀಸರು ಮಂಗಳೂರಿಗೆ ಕರೆದು ತರುತ್ತಿದ್ದಾರೆ.
ಪರಾರಿಯಾದ ವಿದ್ಯಾರ್ಥಿಗಳಲ್ಲಿ ಇಬ್ಬರು ಬೆಂಗಳೂರು ಮತ್ತು ಒಬ್ಬಳು ಚಿಕ್ಕಮಗಳೂರಿನವರೆಂದು ತಿಳಿದು ಬಂದಿದೆ.
ಬುಧವಾರ ಮುಂಜಾನೆ 3.30ರ ವೇಳೆಗೆ ವಿದ್ಯಾರ್ಥಿಗಳು ಹಾಸ್ಟೆಲ್ನ ಕಿಟಕಿ ಮುರಿದು ಪರಾರಿಯಾಗಿದ್ದರು. ಪರಾರಿಯಾದ ವಿಷಯ ಬುಧವಾರ ಬೆಳಗ್ಗೆ ಸ್ನೇಹಿತೆಯರ ಗಮನಕ್ಕೆ ಬಂದಿತ್ತು. ಕಂಕನಾಡಿ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ವಿದ್ಯಾರ್ಥಿನಿಯರು ಮಂಗಳೂರು ರೈಲು ನಿಲ್ದಾಣ ಮೂಲಕ ಕೊಯಮುತ್ತೂರಿಗೆ ಪ್ರಯಾಣಿಸಿರುವುದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿನಿಯರ ಪೋಷಕರು ಕೊಯಮುತ್ತೂರಿಗೆ ತೆರಳಿದ್ದರು. ವಿದ್ಯಾರ್ಥಿನಿಯರು ಕೊಯಮುತ್ತೂರಿಗೆ ತೆರಳಿರುವ ಮಾಹಿತಿ ಸಿಕ್ಕ ಕೂಡಲೇ ಮಂಗಳೂರು ಪೊಲೀಸರು ಕೊಯಮುತ್ತೂರು ಮತ್ತು ಚೆನ್ನೈ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಚೆನ್ನೈ ಪೊಲೀಸರು ಚೆನ್ನೈನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಿದ್ಯಾರ್ಥಿನಿಯರನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಸತ್ಯಾಂಶ ಬಹಿರಂಗವಾಗಿದ್ದು, ವಿದ್ಯಾರ್ಥಿನಿಯರನ್ನು ವಶಕ್ಕೆ ಪಡೆದು ಸ್ವೀಕಾರ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
ಕೊಯಮತ್ತೂರಿನಿಂದ ಚೆನ್ನೈಗೆ ತೆರಳಿದ ಮಂಗಳೂರು ತಂಡ ಶುಕ್ರವಾರ ವಿದ್ಯಾರ್ಥಿನಿಯರನ್ನು ವಶಕ್ಕೆ ಮಂಗಳೂರಿಗೆ ಕರೆದು ತರುತ್ತಿದ್ದಾರೆ.